ಮಾಗಡಿ: ಮಾತೃಭಾಷೆ ತೆಲುಗು ಆದರೂ ಎಚ್.ವಿ.ನಂಜುಂಡಯ್ಯ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಲೇಖಕ ತಾ.ನಂ. ಕುಮಾರಸ್ವಾಮಿ ತಿಳಿಸಿದರು.
ಕರ್ನಾಟಕ ಪ್ರತಿಭಾ ಕೇಂದ್ರ ಮತ್ತು ಗ್ರಾಮೀಣ ವಸತಿ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಎಚ್.ವಿ ನಂಜುಂಡಯ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ನಂಜುಂಡಯ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
’ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನ ಕನ್ನಡ ಸಾಹಿತ್ಯ ಪರಿಷತ್, ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ದುಡಿದರು. ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿದ್ದರು. ಎಡ್ಗರ್ ಥಸ್ಟ್ನ್ ಮತ್ತು ಅನಂತ ಕೃಷ್ಣ ಅಯ್ಯಂಗಾರ್ ಜತೆಗೆ ಸೇರಿ ದಿ.ಮೈಸೂರು ಟ್ರೈಬ್ಸ್ ಆಂಡ್ ಫೋಕ್ ಕಲ್ಚರ್ ಥ್ರೂ ಕೆನರಾ ಎಂಬ ಆಂಗ್ಲಭಾಷೆಯ ಕೃತಿಯನ್ನು ರಚಿಸಿ, ಆದಿಮೂಲ ಸಮುದಾಯಗಳ ಜನಪದ ಪರಂಪರೆಯನ್ನು ಸಂಗ್ರಹಿಸಿ ಮಹದುಪಕಾರ ಮಾಡಿದ್ದಾರೆ’ ಎಂದರು.
ಪ್ರತಿಭಾ ಕೇಂದ್ರದ ಅಧ್ಯಕ್ಷ ಪಾನ್ಯಂ ನಟರಾಜು ಮಾತನಾಡಿ, ’ಶಾಲೆ, ಸಮುದಾಯದ ಪರಿವರ್ತನೆಯ ದೃಷ್ಟಿ ಇಟ್ಟುಕೊಂಡು ತಾಲ್ಲೂಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಶೋಕ್ ಪುಸ್ತಕ ಓದುವ ಹವ್ಯಾಸ ಕಮರುತ್ತಿದೆ ಎಂದರು. ಕವಿ.ಡಿ. ರಾಮಚಂದ್ರಯ್ಯ, ತಾಲ್ಲೂಕು ಕ.ಸಾ.ಪ. ಅಧ್ಯಕ್ಷೆ ಕಲ್ಪನಾ ಶಿವಣ್ಣ ಮಾತನಾಡಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಬಂಧ ಲೇಖನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಮತ್ತು ಅತ್ಯುನ್ನತ ಅಂಕ ಗಳಿಸಿದ ಹುಲಿಕಟ್ಟೆ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪುಸ್ತಕದ ರೂಪದ ಗೌರವ ನೀಡಿದರು.
ಎಚ್.ವಿ ನಂಜುಂಡಯ್ಯ ಕುಟಂಬಸ್ಥರಾದ ಲೀಲಾವತಿ, ರಾಷ್ಟ್ರ ಪ್ರಶಸ್ತಿ ವಿಜೇತ ಬೊಂಬೆಯಾಟದ ರಂಗನಾಥ್, ಲೇಖಕ ರಾಮಮೂರ್ತಿ, ಪ್ರತಿಭಾ ಕೇಂದ್ರದ ಉಪಾಧ್ಯಕ್ಷ ಮುದ್ದುವೀರಯ್ಯ, ಪ್ರಾಂಶುಪಾಲ ಗೋವಿಂದರಾಜು, ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ವಿ ವೆಂಕಟೇಶ್ ಹಾಗೂ ವಿದ್ಯಾರ್ಥಿಗಳು ಇದ್ದರು.