ಹಾಸನ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಬುಧವಾರ 53 ಪ್ರಕರಣ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 29126ಕ್ಕೆ ಏರಿಕೆಯಾಗಿದೆ.
ಚಿಕಿತ್ಸೆ ಪಡೆದು ಎಂಟು ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 268 ಸಕ್ರಿಯ ಪ್ರಕರಣಗಳ ಪೈಕಿ ಆರು ರೋಗಿಗಳು ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಕಾಯಿಲೆಯಿಂದ ಈವರೆಗೆ 469 ಜನ ಮೃತಪಟ್ಟಿದ್ದಾರೆ.
ಹೊಸದಾಗಿ ಆಲೂರು3, ಅರಕಲಗೂಡು 2, ಅರಸೀಕೆರೆ 9, ಬೇಲೂರು 5, ಚನ್ನರಾಯಪಟ್ಟಣ 3, ಹಾಸನ 21, ಹೊಳೆನರಸೀಪುರ 8, ಸಕಲೇಶಪುರ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ಕುಮಾರ್ ತಿಳಿಸಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಆಯುಷ್ ಆಸ್ಪತ್ರೆಯನ್ನು ಕೋವಿಡ್ ಆರೈಕೆ ಕೇಂದ್ರವಾಗಿ ಬದಲಿಸಬೇಕು. ಎರಡು ತಿಂಗಳು ಯಾವುದೇ ತರಬೇತಿ ನಡೆಸದೆ ಜಿಲ್ಲಾ ತರಬೇತಿ ಕೇಂದ್ರ ಹಾಗೂ ಜಿಲ್ಲೆಯ ಸಂಪರ್ಕ ಕೇಂದ್ರಗಳನ್ನು ಬಳಸಿ 100 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರಗಳಾಗಿ ಪರಿವರ್ತಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.