ಹಳೇಬೀಡು: ಬೆಳಿಗ್ಗೆ 8ರ ನಂತರ ಹಳೇಬೀಡಿನಿಂದ ಹಾಸನಕ್ಕೆ ಸಮರ್ಪಕ ಬಸ್ ಸೌಲಭ್ಯ ಇಲ್ಲದೇ ಸಕಾಲಕ್ಕೆ ಶಾಲೆ–ಕಾಲೇಜಿಗೆ ಹೋಗಲು ತೊಂದರೆಯಾಗಿದೆ ಎಂದು ಆರೋಪಿಸಿ ಗೋಣಿಸೋಮನಹಳ್ಳಿ ಗಡಿಯಲ್ಲಿ ವಿದ್ಯಾರ್ಥಿಗಳು ಬುಧವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.
‘ಹಳೇಬೀಡು ಬಸ್ ನಿಲ್ದಾಣದಿಂದ ಬೆಳಿಗ್ಗೆ 8.15 ಹಾಗೂ 8.30ಕ್ಕೆ ಹೊರಟು ಹಾಸನ ತಲುಪುವ ಬಸ್ಸುಗಳು ನಿಗದಿತ ಸಮಯಕ್ಕೆ ಬರದೇ ತೊಂದರೆಯಾಗಿದೆ. ಗೋಣಿಸೋಮನಹಳ್ಳಿ ಗಡಿಯಲ್ಲಿ ವೇಗದೂತ ಬಸ್ಸುಗಳ ನಿಲುಗಡೆ ಇದೆ. ಆದರೂ 8.45ಕ್ಕೆ ಹಳೇಬೀಡಿನಿಂದ ಬರುವ ಬಸ್ಸನ್ನು ಗೋಣಿಸೋಮನಹಳ್ಳಿ ಗಡಿಯಲ್ಲಿ ಒಂದೊಂದು ದಿನ ನಿಲ್ಲಿಸುವುದಿಲ್ಲ. ಕೆಲ ಬಸ್ಸುಗಳು ಹಳೆಬೀಡಿನಿಂದಲೇ ಭರ್ತಿಯಾಗಿ ಬರುತ್ತವೆ. ಇಂಥ ಸಂದರ್ಭದಲ್ಲಿ ಬಸ್ಸಿನಲ್ಲಿ ಕಾಲಿಡುವುದಕ್ಕೂ ಸ್ಥಳವಿಲ್ಲದೇ ಕಾಲೇಜಿಗೆ ತೆರಳಲು ಸಾಧ್ಯವಾಗುವುದಿಲ್ಲ. ಸಂಜೆ ವೇಳೆ 5ರ ನಂತರ ಹಾಸನದಿಂದ ಹಳೇಬೀಡಿಗೆ ಬಸ್ ವ್ಯವಸ್ಥೆ ಸರಿ ಇಲ್ಲದೇ ಊರಿಗೆ ಹೋಗಲು ತೊಡಕಾಗಿದೆ’ ಎಂದು ವಿದ್ಯಾರ್ಥಿಗಳು ಸಮಸ್ಯೆಯನ್ನು ವಿವರಿಸಿದರು.
ಬಸ್ ಅವ್ಯವಸ್ಥೆಯಿಂದಾಗಿ ಹಾಸನದ ಶಾಲೆ, ಕಾಲೇಜಿಗೆ ಹೋಗುವವರು ಮಾತ್ರವಲ್ಲದೆ, ಹಳೇಬೀಡಿಗೆ ಹೋಗುವವರಿಗೂ ತೊಂದರೆಯಾಗಿದೆ. ಗೋಣಿಸೋಮನಹಳ್ಳಿ ಗಡಿಯಲ್ಲಿ ಹೆಚ್ಚು ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಾರೆ. ಬೇರೆ ಊರಿಗೆ ಹೋಗುವವರು ಗೋಣಿಸೋಮನಹಳ್ಳಿ ಮಾತ್ರವಲ್ಲದೇ, ರಾಜಗೆರೆ, ಸೊಪ್ಪಿನಹಳ್ಳಿಯ ಜನರು ಗಡಿಗೆ ಬಂದು ಬಸ್ಸಿನಲ್ಲಿ ಪ್ರಯಾಣಿಸಬೇಕು. ವೇಗದೂತ ಬಸ್ಸಿನಲ್ಲಿ ಪ್ರಯಾಣಿಸುವ ತಟ್ಟೆಹಳ್ಳಿ ಗ್ರಾಮಸ್ಥರು ಸಹ ಗೋಣಿಸೋಮನಹಳ್ಳಿ ಗಡಿಗೆ ಬರುತ್ತಾರೆ. ಹೀಗಾಗಿ ಗೋಣಿಸೋಮನಹಳ್ಳಿ ಮಾರ್ಗವಾಗಿ ಜಿಲ್ಲಾ ಕೇಂದ್ರ ಹಾಸನದಿಂದ ಹಳೇಬೀಡಿಗೆ ಬಂದು ಹಿಂದಿರುಗುವಂತಹ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಆಗಬೇಕು’ ಎಂದು ಗ್ರಾಮ ಪಂಚಾಯತಿ ಸದಸ್ಯ ಪ್ರಸನ್ನ ತಿಳಿಸಿದರು.
‘ತಾಲ್ಲೂಕು ಕೇಂದ್ರ ಬೇಲೂರಿನಲ್ಲಿ ಸಾರಿಗೆ ಸಂಸ್ಥೆಯ ಡಿಪೊ ಆರಂಭವಾಗಿದೆ. ಹೊಸದಾಗಿ ಬಸ್ ಓಡಿಸುವ ವಿಚಾರದಲ್ಲಿ ಬೇಲೂರು ಡಿಪೊದವರು ಮನಸ್ಸು ಮಾಡುವುದಿಲ್ಲ. ಹಾಸನ ಡಿಪೊದವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ನಾವು ಯಾರ ಬಳಿಗೆ ಹೋಗಿ ಬಸ್ ಕೇಳಬೇಕು’ ಎಂದು ರೈತ ಮುಖಂಡ ಗಡಿಮಲ್ಲಿಕಾರ್ಜುನ ಪ್ರಶ್ನಿಸಿದರು. ಮುಖಂಡರಾದ ಶಿವಕುಮಾರ್, ಜಯಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.