ಹೊಳೆನರಸೀಪುರ: ಎರಡೂ ಕಾಲಿಲ್ಲದ ಯುವಕನೊಬ್ಬನನ್ನು ತಾಲ್ಲೂಕಿನ ಗವಿಸೋಮನಹಳ್ಳಿಯ ದೇಗುಲದಲ್ಲಿ ಸೋಮವಾರ ಮದುವೆಯಾಗುವ ಮೂಲಕ ಯುವತಿಯೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯುವಕ ಶ್ರೀಮಂತನಲ್ಲದಿದ್ದರೂ; ಯುವತಿ ಮದುವೆಯಾಗಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ಮದುವೆ ಹಲವರ ಹುಬ್ಬೇರಿಸಿದೆ.
ಗವಿಸೋಮನಹಳ್ಳಿಯ ವಿಶ್ವಕರ್ಮ ಜನಾಂಗದ ಕಾಳಮ್ಮ–ಗಂಗಾಧರಾಚಾರ್ ಪುತ್ರ ಜಿ.ಜಿ.ಸೋಮಾಚಾರ್ ಪುಟ್ಟಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.
ಶಾಂತಿಗ್ರಾಮ ಹೋಬಳಿಯ ಶಶಿಕಲಾ ಲೇಟ್ ನರಸಿಂಹಮೂರ್ತಿ ಪುತ್ರಿ ವೀಣಾ, ಸೋಮಾಚಾರ್ ಅವರನ್ನು ವರಿಸಿದ್ದಾರೆ.
‘ಎರಡೂ ಗ್ರಾಮದ ಹಿರಿಯರು, ಈ ಮದುವೆ ಬಗ್ಗೆ ಹುಡುಗ–ಹುಡುಗಿಯ ಅಭಿಪ್ರಾಯ ಕೇಳಿ, ಇಬ್ಬರ ಒಪ್ಪಿಗೆ ನಂತರವೇ ಮದುವೆ ಮಾಡಿಸಿದ್ದೇವೆ’ ಎಂದು ಗವಿಸೋಮನಹಳ್ಳಿಯ ಗವಿರಂಗನಾಥಸ್ವಾಮಿ ದೇಗುಲದ ಅರ್ಚಕ ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಇವರಿಬ್ಬರ ಸಂಸಾರ ಜೀವನಕ್ಕಾಗಿ ಕೆಲಸವೊಂದನ್ನು ಕೊಡಿಸಬೇಕು ಎಂದು ಗ್ರಾಮಸ್ಥರು ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ.