ಅರಕಲಗೂಡು: ದೀಪಾವಳಿ ಹಬ್ಬದ ಮುನ್ನಾ ದಿನವಾದ ಸೋಮವಾರ ಪಟ್ಟಣದಲ್ಲಿ ಹಬ್ಬದ ವಸ್ತುಗಳ ಖರೀದಿ ಬಿರುಸಿನಿಂದ ನಡೆಯಿತು.
ಬೆಲೆ ಏರಿಕೆ ನಡುವೆಯೂ ಜನರು ಹಬ್ಬಕ್ಕೆ ಅಗತ್ಯವಾದ ಹೂವು, ಹಣ್ಣು, ಬಾಳೆ ಕಂದು, ಮಾವಿನ ಸೊಪ್ಪು, ವೀಳ್ಯೆದೆಲೆ, ಗೋ ಪೂಜೆ ಬಳಿಕ ದನಗಳ ಕೊರಳಿಗೆ ಕಟ್ಟಲು ಮೋಟುಳಿ ಹಂಬು ಮುಂತಾದ ವಸ್ತು ಖರೀದಿ ನಡೆಸಿದರು. ಸೇವಂತಿಗೆ ಮಾರಿಗೆ ₹50 ರಿಂದ ₹60 ಬಾಳೆ ಹಣ್ಣು ಕೆಜಿಗೆ ₹80, ಕಿತ್ತಲೆ ಹಣ್ಣು ಕೆಜಿಗೆ ₹50, ಬಾಳೆ ಕಂದು ಜೋಡಿ ₹30ರಲ್ಲಿ ಮಾರಾಟ ವಾಯಿತು. ಅನಕೃ ವೃತ್ತ, ಕಾಲೇಜು ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು.
ಲಕ್ಷ್ಮೀ ಪೂಜೆ ಸಂಭ್ರಮ: ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಪಟ್ಟಣದಲ್ಲಿ ವರ್ತಕರು ತಮ್ಮ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ನಡೆಸಿದರು. ಅಂಗಡಿಗಳನ್ನು ತಳಿರು, ತೊರಣ, ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿದ್ಯುಕ್ತವಾಗಿ ಲಕ್ಷ್ಮಿ ಕಳಸ ಪ್ರತಿಷ್ಠಾಪಸಿ ಪೂಜೆ ನಡೆಸಿ ತಮ್ಮ ವ್ಯಾಪಾರ, ವಹಿವಾಟು ಲಾಭದಾಯಕವಾಗಿ ನಡೆಯುವಂತೆ ಪ್ರಾರ್ಥಿಸಿದರು. ಗ್ರಾಹಕರಿಗೆ ಸಿಹಿ ನೀಡಿ ಸಂಭ್ರಮಿಸಿದರು.