ಚನ್ನರಾಯಪಟ್ಟಣ: ಸಂಶೋಧನೆಯಿಂದ ಸಮಾಜಕ್ಕೆ ಅನುಕೂಲ ಆಗುವಂತಿರಬೇಕು ಎಂದು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಬಿ.ಇ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕರಿಗಾಗಿ ಶುಕ್ರವಾರ ಏರ್ಪಡಿಸಿದ್ದ ಮುಂದುವರಿದ ಸಂಶೋಧನಾ ವಿಧಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯವಸ್ಥಿತ ರೀತಿಯಲ್ಲಿ ಸಂಶೋಧನೆ ಕೈಗೊಳ್ಳಬೇಕು. ಸಂಶೋಧನೆ ಮಾಡಬೇಕಾದರೆ ವಿಧೇಯತೆ ಮತ್ತು ಪ್ರಾಮಾಣಿಕತೆ ಇರಬೇಕು. ಅಧ್ಯಾಪಕರು ಕೈಗೊಳ್ಳುವ ಸಂಶೋಧನೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಿರಬೇಕು. ತರಗತಿಯಲ್ಲಿ ಪರಿಣಾಮಕಾರಿಯಾಗಿ ಬೋಧಿಸಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಪೂರ್ಣಿಮಾ ಮಾತನಾಡಿ, ಸಂಶೋಧನೆಯಿಂದ ಜ್ಞಾನ ವೃದ್ಧಿಸಿಕೊಳ್ಳಬಹುದು. ಇದು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಉನ್ನತ ಶಿಕ್ಷಣದಲ್ಲಿ ಸಂಶೋಧನೆಗೆ ಹೆಚ್ಚು ಅವಕಾಶಗಳಿವೆ. ಇದರಿಂದ ಸಾಮಾಜಿಕ ಸಂಸ್ಥೆಗಳಲ್ಲಿ, ಐಸಿಎಸ್ಆರ್ ಹಾಗೂ ಇಗ್ನೋ ಸಂಸ್ಥೆಯಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯ ಇವೆ ಎಂದು ತಿಳಿಸಿದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎನ್.ಎಸ್. ರಾಮೇಗೌಡ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸಂಶೋಧನೆ ನಡೆಸಿ ಲಸಿಕೆ ಕಂಡು ಹಿಡಿಯಲಾಯಿತು. ತೆಂಗಿನ ಮರಗಳಿಗೆ ತಗುಲಿದ್ದ ನುಸಿ ರೋಗ ನಿವಾರಿಸಲು ಸಂಶೋಧನೆ ನಡೆಸಿ ಔಷಧಿ ಕಂಡು ಹಿಡಿಯಲಾಯಿತು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಕೆ. ಮಂಜುನಾಥ ಮಾತನಾಡಿ, ಸಂಶೋಧನೆ ಮತ್ತು ಆವಿಷ್ಕಾರಗಳಿಂದ ಸಾಕಷ್ಟು ಅನುಕೂಲ ಇದೆ. ಸಂಶೋಧನೆ ನಿರಂತರವಾಗಿರಬೇಕು ಎಂದು ಹೇಳಿದರು. ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎನ್. ಬಸವರಾಜು ಮಾತನಾಡಿದರು.
ಐಕ್ಯುಎಸಿ ಸಂಯೋಜಕ ಡಾ.ಬಿ.ಎನ್. ಚಂದ್ರಶೇಖರ್, ಸಹಾಯಕ ಪ್ರಾಧ್ಯಾಪಕರಾದ ಡಾ.ಎನ್.ಟಿ. ನಾಗರಾಜು, ಡಾ.ಎಂ. ನಿರುಪಮಾ, ಎಚ್.ಜೆ. ಅರ್ಪಿತಾ, ಜೆ.ಭಾಸ್ಕರ ಇದ್ದರು.