ಬೇಲೂರು: ‘ನಾವೇ ಹಿಂದುತ್ವವಾದಿ ಎಂಬ ಮುಖವಾಡ ಹಾಕಿಕೊಂಡು, ಜನತೆಗೆ ಸುಳ್ಳು ಭರವಸೆ ನೀಡುತ್ತಿರುವ ಇಂದಿನ ಬಿಜೆಪಿ ಪಕ್ಷದಲ್ಲಿ ಯಾವುದೇ ತತ್ವ ಸಿದ್ದಾಂತವಿಲ್ಲ. ಹಾಗಾಗಿ ಬಿಜೆಪಿಗೆ ಮುಂದಿನ ದಿನದಲ್ಲಿ ಭವಿಷ್ಯವಿಲ್ಲ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸಂಸ್ಥಾಪಕ, ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಗುರುವಾರ ಇಲ್ಲಿನ ಚನ್ನಕೇಶವ ದೇಗುಲಕ್ಕೆ ಭೇಟಿ ನೀಡಿ, ಇಲ್ಲಿನ ಶಿಲ್ಪ ವೈಭವ ಹಾಗೂ ಚನ್ನಕೇಶವಸ್ವಾಮಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಈ ಹಿಂದಿನ ಬಿಜೆಪಿ ಮತ್ತು ಇತ್ತೀಚಿನ ಬಿಜೆಪಿಗೆ ವ್ಯತ್ಯಾಸವಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿದವರಿಗೆ ಮನ್ನಣೆ ನೀಡುವ ಕಾಲದಲ್ಲಿ, ಜನರು ಕೂಡ ಬಿಜೆಪಿಗೆ ಬೆಂಬಲ ನೀಡುತ್ತ ಬಂದಿದ್ದಾರೆ. ಆದರೆ ಹಿರಿಯರನ್ನು ನಿರ್ಲಕ್ಷಿಸಿದವರಿಗೆ ಜನತೆ ತಕ್ಕ ಉತ್ತರ ನೀಡಿದ್ದಾರೆ’ ಎಂದರು.
‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದ್ದು, ಬಿಜೆಪಿ ವಿರುದ್ದವಲ್ಲ, ರಾಜ್ಯದ ಜನತಗೆ ಸದೃಢ ಮತ್ತು ಪಾರದರ್ಶಕ ಆಡಳಿತ ನೀಡಲು, ಬಸವಣ್ಣನವರ ಆಶೋತ್ತರಗಳಂತೆ ಹೊಸ ಪಕ್ಷವನ್ನು ಸ್ಥಾಪಿಸಲಾಗಿದೆ. ಇದೇ ಆಗಸ್ಟ್ನಿಂದ ರಾಜ್ಯದಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡಲು ನಿರ್ಧರಿಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನೆ ಮಾಡಲಾಗುವುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಪರ್ಧಿಸಲಿದೆ. ಜನತೆ ಕೂಡ ಪ್ರಾದೇಶಿಕವಾದ ಹೊಸ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಮೂರು ದಿನದಿಂದ ಹಾಸನ-ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಚಾರ ಕೈಗೊಂಡಿದ್ದು, ಐತಿಹಾಸಿಕ ಮತ್ತು ಧಾರ್ಮಿಕ ದೇಗುಲಕ್ಕೆ ಭೇಟಿ ನೀಡುತ್ತಿರುವೆ. ಬೇಲೂರಿಗೆ ಮೂರು ಬಾರಿ ಬಂದಿದ್ದೆ. ಈಗ ಕುಟುಂಬ ಸಮೇತ ಚನ್ನಕೇಶವ ದೇಗುಲ ವೀಕ್ಷಣೆಗೆ ಬಂದಿರುವೆ’ ಎಂದು ಹೇಳಿದರು.
ನನ್ನ ಒಟ್ಟು 152 ಆಸ್ತಿಗಳ ಪೈಕಿ 80 ಆಸ್ತಿಗಳನ್ನು ಜಪ್ತಿಗೆ ಆದೇಶವಿದೆ. ಈ ಆದೇಶದ ಪ್ರಕಾರ ಪ್ರಕರಣ ಇತ್ಯರ್ಥವಾಗುವವರೆಗೆ ಈ ಆಸ್ತಿ ಮಾರಾಟಕ್ಕೆ ಅವಕಾಶವಿಲ್ಲ.ಗಾಲಿ ಜನಾರ್ದನ ರೆಡ್ಡಿ, ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.