ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ| ಮರಳು ಸಾಗಣೆ ಮೇಲೆ ಸಿಸಿಟಿವಿ ಕ್ಯಾಮೆರಾ ಕಣ್ಣು

ಅಕ್ರಮ ಮರಳು ತಡೆಗೆ ಕಂಟ್ರೋಲ್ ರೂಂ: ಎಸ್ಪಿ ಹರಿರಾಂ ಶಂಕರ್‌ ಕ್ರಮ
Last Updated 9 ಮಾರ್ಚ್ 2023, 5:30 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ದೂರುಗಳು ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಸ್ಯಾಂಡ್ ಮೈನಿಂಗ್ ಮಾನಿಟರಿಂಗ್ ಕಂಟ್ರೋಲ್ ರೂಂ ಆರಂಭಿಸಲಾಗಿದೆ.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರೊಂದಿಗೆ ಸಮಾಲೋಚಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲಾಡಳಿತದಿಂದ ₹30 ಲಕ್ಷ ಅನುದಾನ ಒದಗಿಸಲಾಗಿದ್ದು, 54 ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಇಲ್ಲಿನ ಕುವೆಂಪು ನಗರದಲ್ಲಿ ಸೈನ್ ಇನ್ ಸೆಕ್ಯೂರಿಟಿ ನಿರ್ವಹಣೆಯೊಂದಿಗೆ ಜಿಲ್ಲೆಯ ಗಡಿ ಪ್ರದೇಶ, ಮರಳು ಡಿಪೋ ಸಮೀಪ, ಔಟ್ ಪೋಸ್ಟ್ ಹಾಗೂ ಅಕ್ರಮ ಮರಳು ಸಾಗಣೆ ಮಾಡುವ ಪ್ರಮುಖ ಗ್ರಾಮಗಳ ರಸ್ತೆಯ ಆಯಕಟ್ಟಿನ ಸ್ಥಳಗಳಲ್ಲಿ 54 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಪ್ರತಿ ಸ್ಥಳದಲ್ಲೂ ಎರಡು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ದಿನದ 24 ಗಂಟೆ ಕಾರ್ಯ ನಿರ್ವಹಿಸಲಿವೆ. ಕಂಟ್ರೋಲ್ ರೂಂಗಳಲ್ಲಿ ವಿಡಿಯೊ ಸಂಗ್ರಹವಾಗಲಿದ್ದು, ಸಿಸಿಟಿವಿ ಕ್ಯಾಮೆರಾ ಹಾಗೂ ಸಂಗ್ರಹ ಉಪಕರಣ (ಡಿವಿಅರ್) ಕಳ್ಳತನವಾದರೂ ಮುಖ್ಯ ಕೇಂದ್ರದಲ್ಲಿ ಮಾಹಿತಿ ದೊರೆಯಲಿದೆ. ಸಿಸಿಟಿವಿ ಕ್ಯಾಮೆರಾ ಕಳ್ಳತನ ಆಗದಂತೆ ಕಂಬಗಳಿಗೆ ಮೊಳೆಗಳನ್ನು ಅಳವಡಿಸಲಾಗಿದೆ.

ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ರವರೆಗೆ ಮರಳು ಸಾಗಣೆಗೆ ಅವಕಾಶವಿದ್ದು, ನಂತರ ಈ ರಸ್ತೆಗಳಲ್ಲಿ ವಾಹನ ಅಪಘಾತ ಸೇರದಂತೆ ಯಾವುದೇ ಅಕ್ರಮ ಚಟುವಟಿಕೆಗಳು ನಡೆದರೂ ಪೊಲೀಸರಿಗೆ ಈ ಕಂಟ್ರೋಲ್ ರೂಂ ಮೂಲಕ ಮಾಹಿತಿ ಲಭ್ಯವಾಗಲಿದೆ.

ಕೂಡಲೇ ಕಂಟ್ರೋಲ್‌ ರೂಂನಿಂದ ದೂ.ಸಂ. 112 ಹಾಗೂ ಗಸ್ತಿನಲ್ಲಿರುವ ಪೊಲೀಸರಿಗೆ ಮಾಹಿತಿ ರವಾನೆ ಆಗಲಿದೆ. ಗಣಿ ಇಲಾಖೆ ಮತ್ತು ಸ್ಥಳೀಯ ಆಡಳಿತಕ್ಕೆ ಮಾಹಿತಿ ಲಭ್ಯವಾಗಲಿದ್ದು, ಅಕ್ರಮ ಚಟುವಟಿಕೆ ತಡೆಯಬಹುದಾಗಿದೆ. ವಿಡಿಯೊ ಜೊತೆಗೆ ಸಿಸಿ ಕ್ಯಾಮೆರಾಗಳಲ್ಲಿ ಆಡಿಯೊ ಕೂಡ ದಾಖಲಾಗಲಿದ್ದು, ಹೆಚ್ಚು ನೆರವಾಗಲಿದೆ ಎಂದು ಎಸ್ಪಿ ಹರಿರಾಂ ಶಂಕರ್‌ ಮಾಹಿತಿ ಹಂಚಿಕೊಂಡರು.

ಈಗಾಗಲೇ ಪೊಲೀಸ್ ಇಲಾಖೆ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಮೂಲಕ ಮಂಗಳೂರು, ಕುಂದಾಪುರ, ಉಡುಪಿ, ಮೈಸೂರಿನಲ್ಲಿ ಇದೇ ರೀತಿಯ ಕಾರ್ಯಾಚರಣೆ ಆರಂಭಿಸಲಾಗಿದ್ದು, ಅಕ್ರಮ ಚಟುವಟಿಕೆ ಹಾಗೂ ಅಪರಾಧ ಪ್ರಕರಣಗಳು ನಿಯಂತ್ರಿಸಲು ಹಾಗೂ ಪತ್ತೆ ಹಚ್ಚಲು ಸಹಕಾರಿಯಾಗಿದೆ. ಸದ್ಯ ಕಂಟ್ರೋಲ್ ರೂಂ ಸ್ಥಾಪನೆ, ನಿರ್ವಹಣೆ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸುಮಾರು ₹ 30 ಲಕ್ಷ ವೆಚ್ಚ ತಗುಲಿದೆ ಎಂದ ಎಸ್ಪಿ ತಿಳಿಸಿದರು.

ದಿನದ 24 ಗಂಟೆ ಕಂಟ್ರೋಲ್ ರೂಂನಲ್ಲಿ ನಾಲ್ಕು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ದಾಖಲಾಗುವ ಮಾಹಿತಿಯನ್ನು ಕ್ರೋಡೀಕರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ರಮ ಮರಳು ಸಾಗಣೆ ಹಾಗೂ ಅಪಘಾತ ಪ್ರಕರಣಗಳ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

ಸೈನ್ ಇನ್ ಸೆಕ್ಯೂರಿಟಿ ಸಂಚಾಲಕ ಕೃಷ್ಣ ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT