ಬೇಲೂರು: ‘ಶ್ರಮದಾನವು ಶ್ರೇಷ್ಠವಾಗಿದ್ದು, ಪ್ರತಿಯೊಬ್ಬರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕೆಂದು’ ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಇಲ್ಲಿನ ಚನ್ನಕೇಶವ ದೇಗುಲದ ಮುಂಭಾಗದಲ್ಲಿ ಭಾನುವಾರ ಆದಾಯ ತೆರಿಗೆ ಇಲಾಖೆಯಿಂದ, ತ್ಯಾಜ್ಯ ಮುಕ್ತ ಭಾರತ ಅಭಿಯಾನದಡಿ ಆಯೋಜಿಸಲಾಗಿದ್ದ, ‘ಸ್ವಚ್ಛತೆಯ ಸೇವೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬೇಲೂರು ದೇಗುಲ ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವು ಗೌರವ ಸಲ್ಲಿಸಬೇಕು. ಸ್ವಾತಂತ್ರ್ಯೋತ್ಸವ, ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಆಂದೋಲನಕ್ಕೆ ಪ್ರಧಾನಿಗಳು 2014ರಲ್ಲಿ ಚಾಲನೆ ನೀಡಿ ದೇಶದಾದ್ಯಂತ ಸ್ವಚ್ಛತೆಗೆ ಕಾರಣರಾದರು. ಈ ಹಿನ್ನೆಲೆಯಲ್ಲಿ ಇಂದು ಎಲ್ಲರೂ ಸ್ವಚ್ಛತೆಗೆ ಮುಂದಾಗಿದ್ದಾರೆ. ಆದಾಯ ತೆರಿಗೆ ಇಲಾಖೆಯವರು ಬೇಲೂರು ದೇಗುಲದ ಆವರಣದ ಸ್ವಚ್ಛತೆಗೆ ಬಂದಿರುವುದು ಸಂತೋಷ. ಇವರಿಗೆ ಬೇಲೂರಿನ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿರುವುದು ಉತ್ತಮ ಬೆಳವಣಿಗೆ’ ಎಂದರು.
ಕರ್ನಾಟಕ ಮತ್ತು ಗೋವಾ ಪ್ರದೇಶ ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತೆ ಚೈತಾಲಿ ಪನ್ ಮಿ ಮಾತನಾಡಿ, ‘ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವುದನ್ನು ಚಳವಳಿಯ ರೀತಿಯಲ್ಲಿ ಮುಂದುವರಿಸಬೇಕು. ನಮ್ಮ ಸ್ಮಾರಕಗಳು ಮತ್ತು ನಮ್ಮ ಪರಿಸರವನ್ನು ಅಕ್ಕರೆ, ಪ್ರೀತಿಯಿಂದ ಕಾಪಾಡಬೇಕು. ಆಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಜಗತ್ತನ್ನು ಬಿಟ್ಟು ಕೊಡಬಹುದು’ ಎಂದರು.
ಈ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದೇಗುಲಕ್ಕೆ ಕಸದ ಬುಟ್ಟಿಗಳನ್ನು ವಿತರಿಸಲಾಯಿತು.
ಬೆಂಗಳೂರು ಆದಾಯ ತೆರಿಗೆ ಇಲಾಖೆ ಆಯುಕ್ತ ದೇವರತ್ನ ಕುಮಾರ್, ಅಮೃತ್ರಾಜ್ ಸಿಂಗ್, ರಘು, ತಹಶೀಲ್ದಾರ್ ಎಂ.ಮಮತಾ, ಪುರಸಭೆ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್, ರೋಟರಿ ಸಂಸ್ಥೆ ಗಣೇಶ್, ಲೋಕೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ಸುಧೀಂದ್ರ ಇದ್ದರು.