ಶ್ರವಣಬೆಳಗೊಳ: ವಿಂದ್ಯಗಿರಿ ಬಾಹುಬಲಿ ಬೆಟ್ಟ ಮತ್ತು ಚಂದ್ರಗಿರಿ ಚಿಕ್ಕಬೆಟ್ಟ ಬಸದಿಗಳ ನಡುವಿನ ಸುಂದರ ಕಲ್ಯಾಣಿಯ ಕಲಾತ್ಮಕ ಗೋಪುರ ಹಾಗು ಸುತ್ತಳತೆಯಲ್ಲಿ ಬೆಳೆದು ನಿಂತಿದ್ದ ಅಪಾರ ಸಂಖ್ಯೆ ಮರ ಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ.
ಶಿಥಿಲಗೊಂಡಿದ್ದ ಕಲಾತ್ಮಕ ಗೋಪುರ ಮತ್ತು ಕಲ್ಯಾಣಿಯನ್ನು ಮೈಸೂರು ಮಹಾರಾಜ ಚಿಕ್ಕ ದೇವರಾಜ ಒಡೆಯರ್ ಆಳ್ವಿಕೆ 17ನೇ ಶತಮಾನದಲ್ಲಿ ನಿರ್ಮಿಸಿದ್ದರ ಇತಿಹಾಸದ ಮಾಹಿತಿಯನ್ನು ಎಳೆಎಳೆಯಾಗಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಸ್ಥಳೀಯ ಎಸ್ಡಿಜೆಎಂಐ ಆಡಳಿತ ಮಂಡಳಿ ಎಚ್ಚೆತ್ತು ಕಲ್ಯಾಣಿಯ ಕಲಾತ್ಮಕ ಸುಂದರ ಗೋಪುರಕ್ಕೆ ಹಾನಿಯಾಗದಂತೆ ಅಪಾರ ಸಂಖ್ಯೆಯಲ್ಲಿ ಬೆಳೆದಿದ್ದ ಅರಳೀಮರದ ಸಸಿಗಳು ಮತ್ತು ಗಿಡಗಂಟೆಗಳನ್ನು ತೆಗೆಸಿ ಮತ್ತೆ ಆಜಾಗದಲ್ಲಿ ಬೆಳೆಯದಂತೆ ಆಸಿಡ್ ಸಿಂಪಡಿಸಲಾಯಿತು.
ಈ ಕಲ್ಯಾಣಿ ದಕ್ಷಿಣದಿಂದ ಉತ್ತರಕ್ಕೆ 107 ಮೀಟರ್, ಪೂರ್ವದಿಂದ ಪಶ್ಚಿಮಕ್ಕೆ 176 ಮೀಟರ್, ಆಳ 20 ಅಡಿ ಮತ್ತು 586 ಮೀಟರ್ ಸುತ್ತಳತೆಯ ಕಲ್ಯಾಣಿ ಗೋಡೆಯ ಸುತ್ತಳತೆಯಲ್ಲಿ ಮರಗಳು ಬೆಳೆದಿದ್ದು, ತೆರೆವುಗೊಳಿಸಿ ಗೋಡೆಗೆ ಧಕ್ಕೆಯಾಗದಂತೆ ಸ್ವಚ್ಛಗೊಳಿಸಲಾಗಿದೆ ಎಂದು ವ್ಯವಸ್ಥಾಪಕ ಬಾಬು ಹೇಳಿದರು.
ಮೈಸೂರು ಮಹಾರಾಜರ ಕಾಲದ ಈ ಸುಂದರ ಕಲ್ಯಾಣಿಯನ್ನು ರಕ್ಷಣೆಗೆ ಇಲ್ಲಿನ ಆಡಳಿತ ಮಂಡಳಿ ತಕ್ಷಣ ಕ್ರಮ ಜರುಗಿಸಿದ್ದಕ್ಕೆ ಗುತ್ತಿಗೆದಾರರಾದ ಎಚ್.ಎಂ.ಶಿವಣ್ಣ, ಎಚ್ ನಾಗರಾಜು, ಕೂಟಿ ಮಂಜು, ಸಂತಸ ವ್ಯಕ್ತಪಡಿಸಿದ್ದಾರೆ.
ಶ್ರವಣಬೆಳಗೊಳದ ಚಿಕ್ಕದೇವರಾಜ ಒಡೆಯರ್ ಕಲ್ಯಾಣಿಯಲ್ಲಿರುವ ಕಲಾತ್ಮಕ ಗೋಪುರವನ್ನು ಗಿಡಗಂಟೆಗಳನ್ನು ಕಿತ್ತು ಸ್ವಚ್ಛಗೊಳಿಸುತ್ತಿರುವ ಕಾರ್ಮಿಕ
ಶ್ರವಣಬೆಳಗೊಳದ ಚಿಕ್ಕದೇವರಾಜ ಒಡೆಯರ್ ಕಾಲದ ಸುಂದರ ಕಲಾತ್ಮಕ ಗೋಪುರವನ್ನು ಸ್ವಚ್ಛಗೊಳಿಸಿದ ನಂತರ ಆಕರ್ಷಕವಾಗಿ ಕಾಣುತ್ತಿರುವುದು.
ಶ್ರವಣಬೆಳಗೊಳದ 2 ಬೆಟ್ಟಗಳ ನಡುವಿನ ಚಿಕ್ಕದೇವರಾಜ ಒಡೆಯರ್ ಕಲ್ಯಾಣಿಯ ವಿಹಂಗಮ ನೋಟದಲ್ಲಿ ಬೆಳೆದು ನಿಂತಿರುವ ಮರಗಿಡಗಳು