ಹಾಸನ: ‘ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಜೊತೆಗೆ ಮೇಕೆದಾಟು ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಕಾಂಗ್ರೆಸ್ ಪಾದಯಾತ್ರೆಯನ್ನು ಮುಂದೂಡಬೇಕು’ ಎಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.
‘ಅಧಿಕಾರದಲ್ಲಿದ್ದಾಗ ಎರಡೂ ಸರ್ಕಾರಗಳು ಯೋಜನೆ ಜಾರಿಗೊಳಿಸಲಿಲ್ಲ. ಈಗ ಜನ ಸತ್ತರೂ ಪರವಾಗಿಲ್ಲ ಎಂಬಂತೆ ಕಾಂಗ್ರೆಸ್ ಅಧಿಕಾರಕ್ಕಾಗಿ ಪಾದಯಾತ್ರೆ ಗಿಮಿಕ್ ಮಾಡುತ್ತಿದೆ. ಎರಡನೇ ಅಲೆ ವೇಳೆ ಚುನಾವಣೆ ನಡೆಸಿದ ಪರಿಣಾಮ ಮೂವತ್ತು ಸಾವಿರ ಕುಟುಂಬಗಳು ಬೀದಿ ಪಾಲಾದವು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತಮ್ಮ ಪುತ್ರ, ವಿಧಾನ ಪರಿಷತ್ ಸದಸ್ಯ ಆರ್.ಸೂರಜ್ ಗೈರಾದ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ‘ಕೋವಿಡ್ ಸಂದರ್ಭದಲ್ಲಿ ಪ್ರಮಾಣ ಸ್ವೀಕಾರ ಸಮಾರಂಭ ಅಗತ್ಯವಿರಲಿಲ್ಲ.ಸೂರಜ್ಗೆ ಸ್ವಲ್ಪ ದಿನ ಕಾಯುವಂತೆ ಹೇಳಿರುವೆ’ ಎಂದರು.