ಹಾಸನ: ‘ಜಿಲ್ಲೆಯ ರೈತರು ಪಂಜಾಬ್ನಿಂದ ಆಲೂಗೆಡ್ಡೆಬಿತ್ತನೆ ಬೀಜ ತರಿಸುವ ಬದಲು ಅಂಗಾಂಶ ಕೃಷಿ ತಂತ್ರಜ್ಞಾನದಿಂದ ಆಲೂಗೆಡ್ಡೆ ಬೆಳೆದು ರಪ್ತು ಮಾಡಬಹುದಾಗಿದೆ’ ಎಂದು ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.
ತೋಟಗಾರಿಕೆ ಇಲಾಖೆ, ಎಚ್ಆರ್ಇಎಸ್ ಸೋಮನಹಳ್ಳಿಕಾವಲು, ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ನಡೆದ ಅಂಗಾಂಶ ಕೃಷಿ ಪದ್ಧತಿ ಮೂಲಕ ಆಲೂಗೆಡ್ಡೆ ಬೆಳೆಯುವ ಬಗ್ಗೆ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿರು.
‘ಹಾಸನದಲ್ಲಿ ಬಿತ್ತನೆ ಬೀಜಕ್ಕಾಗಿ ವರ್ತಕರ ಲಾಬಿ ಹೆಚ್ಚಾಗಿದ್ದು, ಈ ತಂತ್ರಜ್ಞಾನದಿಂದ ಪಾಲಿಮನೆಗಳನ್ನು ನಿರ್ಮಿಸಿ ಆಲೂಗೆಡ್ಡೆ ಸಸಿಗಳನ್ನು ಬೆಳೆಸಬಹುದಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ವರೂಪ್ ಮಾತನಾಡಿ, ‘ಹಾಸನ ತಾಲ್ಲೂಕಿನಲ್ಲಿ ಶೇ 60 ರಷ್ಟು ಆಲೂಗೆಡ್ಡೆ ಬೆಳೆಯುತ್ತಾರೆ. ಅಲ್ಲದೆ ಜಿಲ್ಲೆಯಲ್ಲಿ ವರ್ಷಪೂರ್ತಿ ಬೆಳೆಯನ್ನು ಬೇರೆ ಹಂಗಾಮಿನಲ್ಲಿಯೂ ಬೆಳೆಯುವುದರಿಂದ ಈ ಕ್ಷೇತ್ರೋತ್ಸವ ಉಪಯೋಗವಾಗುತ್ತದೆ. ಇದರ ಪ್ರಯೋಜನವನ್ನು ಎಲ್ಲಾ ರೈತರು ಪಡೆದುಕೊಂಡು ಆರ್ಥಿಕ ಅಭಿವೃದ್ಧಿ ಹೊಂದಿ’ ಎಂದು ತಿಳಿಸಿದರು.
ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತಾರಣಾ ಕೇಂದ್ರದ ಮುಖ್ಯಸ್ಥ ಡಾ. ಅಮರ ನಂಜುಂಡೇಶ್ವರ ಅವರು ರೈತರಿಗೆ ಆಲೂಗೆಡ್ಡೆ ಸಸಿಗಳನ್ನು ವಿತರಿಸಿ ಅಂಗಾಂಶ ಕೃಷಿಯ ಪ್ರಾತ್ಯಕ್ಷಿಕೆ ಕುರಿತು ವಿವರಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್, ಹಾಸನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಂಜಿನಿ ಮೋಹನ್, ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ರವಿ, ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣೇಗೌಡ, ಆಲೂಗೆಡ್ಡೆ ಸಂಶೋಧನಾ ಕೇಂದ್ರದ ಸಂಯೋಜಕ ರವೀಂದ್ರನಾಥ್ ರೆಡ್ಡಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.