ಹಾಸನ: ಸಿದ್ದರಾಮಯ್ಯ ಒಂದು ಸಮಾಜಕ್ಕೆ ಸೀಮಿತರಾದ ನಾಯಕರಲ್ಲ. ಪರಿಶಿಷ್ಟ ಪಂಗಡ (ಎಸ್ಟಿ) ವರ್ಗಕ್ಕೆ ಕುರುಬ ಸಮುದಾಯವನ್ನು ಸೇರಿಸುವುದಕ್ಕೆ ಅವರು ವಿರೋಧ ವ್ಯಕ್ತಡಿಸಿಲ್ಲ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಳ ಸಮುದಾಯಗಳ ನಾಯಕತ್ವ ವಹಿಸಿಕೊಂಡಿರುವ ಅವರು ಒಂದು ಸಮುದಾಯಕ್ಕೆ ಸೀಮಿತನಾಗಿ ಗುರುತಿಸಿಕೊಳ್ಳುವುದಿಲ್ಲ. ನಮ್ಮ ಹೋರಾಟ ಕುರುಬ ಸಮಾಜದ ಒಳಿತಿಗಾಗಿ ಹೊರತು ಆರ್ಎಸ್ಎಸ್ಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್.ವಿಶ್ವನಾಥ್ ಸಾಕಷ್ಟು ನೊಂದಿರುವ ಕಾರಣ ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರ ಪರಿಸ್ಥಿತಿ ನೋಡಿದರೆ ನೋವಾಗುತ್ತಿದೆ. ಅವರ ಅವನತಿಗೆ ಅವರೇ ಕಾರಣ. ಅವರು ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ರಮೇಶ್ ಜಾರಕಿಹೊಳಿ ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನ ಆಗಿರಲಿಲ್ಲ. ಮುಂಬೈ ಟೀಂ ಒಗ್ಗೂಡಿಸಿದವರು ವಿಶ್ವನಾಥ್ ಎಂದರು.
ರಾಜ್ಯದಲ್ಲಿ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಬೇಕೆಂಬ ಹೋರಾಟ ಹೊಸದಲ್ಲ. ಬ್ರಿಟಿಷರ ಕಾಲದ ಗಣತಿ 1868 ರಲ್ಲಿಯೇ ಕುರುಬ ಸಮಾಜದ ಹೆಸರಿತ್ತು. ದಕ್ಷಿಣ ಭಾರತದ ಮೂಲ ನಿವಾಸಿಗಳು ಎಂದು ಅನೇಕ ದಾಖಲಾತಿಗಳಲ್ಲಿವೆ. ಫೆ. 3ಕ್ಕೆ ಪಾದಯಾತ್ರೆ ಮುಗಿಯಲಿದ್ದು. 7ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದೆ ಎಂದು ವಿವರಿಸಿದರು.