ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಸಂತೆಯಲ್ಲಿ ಔಷಧ, ಶಿಕ್ಷೆ ಖಚಿತ: ಡಿ.ಸಿ ಎಚ್ಚರಿಕೆ

ಔಷಧ ಮಾರಾಟಗಾರರು, ಫಾರ್ಮಸಿಸ್ಟ್‌ರಿಗೆ ಡಿ.ಸಿ ಎಚ್ಚರಿಕೆ
Last Updated 13 ಮೇ 2021, 12:51 IST
ಅಕ್ಷರ ಗಾತ್ರ

ಹಾಸನ: ಜೀವ ರಕ್ಷಕ ಔಷಧಿಗಳು ಕಾಳಸಂತೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಾರಾಟವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತ ಸಭಾಂಗಣದಲ್ಲಿ ಗುರುವಾರ ಔಷಧ ಮಾರಾಟಗಾರರು ಹಾಗೂ ಫಾರ್ಮಸಿಸ್ಟ್‌ರ ಸಭೆ ನಡೆಸಿದ ಅವರು, ಈ ಬಗ್ಗೆ ಫಾರ್ಮಸಿಸ್ಟರು, ಔಷಧ ಮಾರಾಟಗಾರರು ಎಚ್ಚರ ವಹಿಸಬೇಕು. ಅಕ್ರಮಗಳಿಗೆ ಕೈ ಜೋಡಿಸಿದರೆ ಶಿಕ್ಷೆ ಖಚಿತ. ಕೋವಿಡ್ 19 ಚಿಕಿತ್ಸೆ ಎಲ್ಲರಿಗೂ ದೊರೆಯಬೇಕು. ರೆಮ್‍ಡಿಸಿವಿರ್‌ ಸೇರಿದಂತೆ ಔಷಧಗಳು ಅಕ್ರಮವಾಗಿ ಹಾಗೂ ದುಬಾರಿ ಬೆಲೆಗೆ ಮಾರಾಟವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಈಗಾಗಲೇ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಔಷಧ ಸರಬರಾಜು ಮತ್ತು ವಿತರಣೆಯಲ್ಲಿ ನಿಗಾ ವಹಿಸಿದ್ದಾರೆ. ಆದರೆ, ಕೆಲವೊಂದು ದುರ್ಬಳಕೆ ಆರೋಪಗಳು ಕೇಳಿ ಬರುತ್ತಿವೆ. ಹಾಗಾಗಿಇದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕಿದೆ ಎಂದು ತಿಳಿಸಿದರು.

ಒಂದು ವೇಳೆ ತಮ್ಮ ಬಳಿ ರೆಮ್ ಡಿಸಿವಿರ್‌ ಚುಚ್ಚುಮದ್ದು ತಮ್ಮ ಬಳಿ ಇಟ್ಟುಕೊಂಡಿದ್ದರೆ ಅಥವಾ ನಕಲಿ ಔಷಧಿ ಮಾರಾಟ ಮಾಡುತ್ತಿರುವುದು ತಿಳಿದು ಬಂದರೆ ಪೊಲೀಸ್ ಕಂಟ್ರೋಲ್ ರೂಂಹಾಗೂ ಡ್ರಗ್ ಕಂಟ್ರೋಲರ್ ಗೆ ಮಾಹಿತಿ ನೀಡಬೇಕು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ಮಾತನಾಡಿ, ಖಾಸಗಿ ನರ್ಸಿಂಗ್ ಹೋಂ ಗಳಲ್ಲಿ ಮತ್ತು ಮೆಡಿಕಲ್ ಸ್ಟೋರ್ ಗಳಲ್ಲಿ ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಹಿಂದೆ ಪರಿಶೀಲನೆ ನಡೆಸಿದ ವೇಳೆ ಬಂದಿರುವ ಪ್ರಕರಣಗಳಲ್ಲಿ ತಾಳೆಯಾಗುತ್ತಿಲ್ಲ. ಪೊಲೀಸ್‌ರನ್ನು ಮಫ್ತಿಯಲ್ಲಿ ಬಿಡಲಾಗುತ್ತಿದ್ದು, ಅಕ್ರಮದ ಬಗ್ಗೆ ಮಾಹಿತಿ ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು. ಈಗಾಗಲೇ ಕೆಲವರನ್ನು ಬಂಧಿಸಿ ವಿಚಾರಣೆ ಕೂಡ ಮಾಡಲಾಗಿದ್ದು,ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಹಾಜರಿದ್ದ ಫಾರ್ಮಸಿಸ್ಟ್, ಔಷಧ ವಿತರಕರು ಮತ್ತು ಮಾರಾಟಗಾರರು ತಾವು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವುದನ್ನು ಮುಂದುವರೆಸಲಾಗುವುದು. ಅಕ್ರಮಸರಬರಾಜು ಕಂಡು ಬಂದಲ್ಲಿ ಅಂಥವರ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಸಭೆಯಲ್ಲಿ ಸಹಾಯಕ ಔಷಧ ನಿಯಂತ್ರಕ ಡಾ. ಗಿರೀಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ್, ಔಷಧ ವಿತರಕರು ಮತ್ತು ಮಾರಾಟಗಾರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT