ನುಗ್ಗೇಹಳ್ಳಿ: ಅಕ್ಕನಹಳ್ಳಿ ಕ್ರಾಸ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಾದ ಎಂ.ದಾಸಪುರ ಬಸವನಪುರ ಮುಳ್ಳಕೆರೆ ನೇರಲಕೆರೆ ಜೆ.ಮಾವಿನಹಳ್ಳಿ ಸೋಸಲಗೆರೆ ಸಮುದ್ರಹಳ್ಳಿ ಅಕ್ಕನಹಳ್ಳಿಕೋಡು ಮತ್ತು ಅಕ್ಕನಹಳ್ಳಿ ಗ್ರಾಮದಲ್ಲಿ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ನಡೆಸಿದರು. ತಾವು ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ನೀರಾವರಿ ಯೋಜನೆಗಳಿಗೆ ಗ್ಯಾರಂಟಿ ನೀಡಿದ್ದು, ರಾಜ್ಯ ಸರ್ಕಾರದ ಬೂಟಾಟಿಕೆಯ ಗ್ಯಾರಂಟಿ ನನ್ನದಲ್ಲ. ಪ್ರಜ್ವಲ್ ರೇವಣ್ಣ ಮತ್ತೊಮ್ಮೆ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಆಶೀರ್ವದಿಸುವಂತೆ ಮನವಿ ಮಾಡಿದರು.
ಜಿಲ್ಲಾ ಕ್ರೈಸ್ತ ಸಂಘಟನೆ ಅಧ್ಯಕ್ಷ ವಿಕ್ಟರ್ ಮಾತನಾಡಿ, ಜಾತಿ,ಧರ್ಮ ಭೇದವಿಲ್ಲದೆ ಕ್ಷೇತ್ರದ ಶಾಸಕರು ಕೆಲಸ ನಿರ್ವಹಿಸುತ್ತಿದ್ದು ಎಂ–ದಾಸಪುರ ಗ್ರಾಮದಲ್ಲಿ ರಸ್ತೆ ಕುಡಿಯುವ ನೀರು , ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮಾಜದ ಜನರಿದ್ದು ಗಂಗಾ ಕಲ್ಯಾಣ ಯೋಜನೆಯಲ್ಲಿ ಅನೇಕ ಬಡ ಕುಟುಂಬದ ರೈತರಿಗೆ ಉಚಿತವಾಗಿ ಕೊಳವೆಬಾವಿಯನ್ನು ಕೊರೆಸಿ ಕೊಟ್ಟಿದ್ದಾರೆ ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಪ್ರಜ್ವಲ್ ರೇವಣ್ಣ ಅವರಿಗೆ ಮತ ನೀಡುವಂತೆ ತಿಳಿಸಿದರು.
ಅಕ್ಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಬೋರೇಗೌಡ , ಮುಖಂಡರಾದ ದೊರೆಸ್ವಾಮಿ, ಬಸವನಪುರ ಪ್ರಕಾಶ್, ತೋಟಿ ನಾಗರಾಜ್, ಎಂ ಎಸ್ ಸುರೇಶ್, ಹೆಬ್ಬಾಳ್ ರವಿ, ಹುಲಿಕೆರೆ ಸಂಪತ್ ಕುಮಾರ್, ದೊಡ್ಡಗನ್ನಿ ಸತೀಶ್, ಎನ್ಎಸ್ ಮಂಜುನಾಥ್,ಸ್ವಾಮಿ ಭಾಗವಹಿಸಿದ್ದರು.