ಹಾಸನ: ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎನ್ನುವ ಕಲ್ಪನೆ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಚನ್ನರಾಯಪಟ್ಟಣ ತಾಲ್ಲೂಕು ಯಲಿಯೂರಿನ ದೇವೀರಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪರಸ್ಪರ ಅನ್ಯೋನ್ಯ ವಾಗಿ ಬಾಳುವ ಒಂದು ವ್ಯವಸ್ಥೆಯನ್ನ ದೇಶದಲ್ಲಿ ಜಾರಿಗೆ ತರಬೇಕು. ನಾವು ಎಲ್ಲಾ ಧರ್ಮವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ’ ಎಂದರು.
‘ನಾನು ಹಿಂದೂ ಅಲ್ವಾ, ನಾನು ಮುಸ್ಲಿಂ ಏನ್ರೀ ಅಥವಾ ಕ್ರಿಶ್ಚಿಯನ್ನ’ ಎಂದು ಪ್ರಶ್ನಿಸಿದ ಗೌಡರು, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಹಿಂದೂ ರಾಷ್ಟ್ರ ಜಾರಿ ಮಾಡುವ ಪರೀಕ್ಷೆ ನಡೆಸಲಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಗಾಂಧೀಜಿ ಹತ್ಯೆಯಾದಾಗ ಮುಸ್ಲಿಮರು ಹೋರಾಟ ಮಾಡಲಿಲ್ಲವೇ? ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು. ಇವರೇನು ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆಯೇ ಎಂದು ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದರು.
ಬಿ.ಆರ್. ಅಂಬೇಡ್ಕರ್ ಅವರು ಬರೆದುಕೊಟ್ಟ ಸಂವಿಧಾನವನ್ನು ದೇಶದ 130 ಕೋಟಿ ಜನರು ಒಪ್ಪುತ್ತಾರೆ ಎನ್ನುವುದಾದರೆ, ಈ ಚುನಾವಣೆಯಲ್ಲಿ ಹಿಂದೂ ರಾಷ್ಟ್ರ ಜಾರಿಯ ಪರೀಕ್ಷೆ ನಡೆಯಲಿ ಎಂದರು.
ಕಾಶ್ಮೀರ ದೇಶದೊಂದಿಗೆ ಸೇರುವಾಗ ಕಲಂ 370 ಜಾರಿಗೆ ಬಂದಿತು. ಅಲ್ಲಿ ಬೌದ್ಧರು, ಮುಸ್ಲಿಮರು, ಹಿಂದೂಗಳು ಇದ್ದಾರೆ. ಆಗಿನ ವಾತಾವರಣವನ್ನು ನೋಡಿ ನಿರ್ಣಯ ಕೈಗೊಳ್ಳಲಾಗಿತ್ತು. 370ನೇ ಕಲಂ ತಾವು ಕೊಟ್ಟಿದ್ದಲ್ಲ ಎಂದು ಸ್ಪಷ್ಟಪಡಿಸಿದರು.
ಕುಲದೇವತೆ ತಾಯಿ ಪಾರ್ವತಿಗೆ ಪೂಜೆ ಮಾಡಿದ್ದೇವೆ. ಎಲಿಯೂರಿನಲ್ಲಿ ದೇವೀರಮ್ಮ, ಹರದನಹಳ್ಳಿಯಲ್ಲಿ ಈಶ್ವರ ದೇವರಿಗೆ ವರ್ಷಕ್ಕೆ ಎರಡು ಬಾರಿ ಬಂದು ಪೂಜೆ ಮಾಡುತ್ತೇವೆ. ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಬಂದು ಪೂಜೆ ಮಾಡುತ್ತಿಲ್ಲ ಎಂದರು.
ಚನ್ನರಾಯಪಟ್ಟಣ ತಾಲ್ಲೂಕಿನ ಯಲಿಯೂರಿನ ದೇವಿರಮ್ಮಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪೂಜೆ ಸಲ್ಲಿಸಿದರು.