ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಜಾರಿ: ಕಣ್ಗಾವಲು ತಂಡ ರಚನೆ

ಚುನಾವಣೆ ನಡೆಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧ: ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್
Last Updated 28 ಮಾರ್ಚ್ 2018, 9:16 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಚುನಾವಣೆ ಆಯೋಗ ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆ ಮಾಡಿದ ಗಳಿಗೆಯಿಂದಲೇ ಜಿಲ್ಲೆಯಲ್ಲೂ ನೀತಿ ಸಂಹಿತೆ ಜಾರಿಯಾಗಿದೆ. ಜಿಲ್ಲಾಡಳಿತದ ಪೂರ್ವಾನುಮತಿ ಇಲ್ಲದೇ ನಡೆಯುವ ಯಾವುದೇ ಚಟುವಟಿಕೆ ಮೇಲೆ ಕಣ್ಗಾವಲು ಇಡಲು ಅಧಿಕಾರಿಗಳ ತಂಡ ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ನೀತಿ ಸಂಹಿತೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಯೋಗದ ನಿರ್ದೇಶನದಂತೆ ಸರ್ಕಾರಿ ಜಾಹೀರಾತು, ಬ್ಯಾನರ್, ಪೋಸ್ಟರ್‌ಗಳನ್ನು ತೆಗೆಯುವ ಕಾರ್ಯ ಆರಂಭಿಸಲಾಗಿದೆ. ದೂರು ದಾಖಲು ಮತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ’ ಎಂದರು.

‘ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ 1696 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಚುನಾವಣಾ ಕಾರ್ಯಕ್ಕೆ ಒಟ್ಟು 10,176 ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತದಾರರ ಗುರುತಿನ ಚೀಟಿಯನ್ನು ಮತದಾನದ ಏಳು ದಿನಗಳ ಮೊದಲು ವಿತರಿಸಲಾಗುವುದು. ಜಿಲ್ಲೆಯ ಮತಗಟ್ಟೆಗಳನ್ನು ಭೌತಿಕವಾಗಿ ಪರಿಶೀಲನೆ ಮಾಡಲಾಗಿದೆ. ಕುಡಿಯುವ ನೀರು, ವಿದ್ಯುತ್, ಶೌಚಾಲಯ, ರ‍್ಯಾಂಪ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ’ ಎಂದರು.

ಮತಪೆಟ್ಟಿಗೆ ಸಂಗ್ರಹ ಹಾಗೂ ಮತ ಎಣಿಕೆಗೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

14.73 ಲಕ್ಷ ಮತದಾರರು: ‘ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಟ್ಟು 14,73,840 ಮತದಾರರು ಇದ್ದಾರೆ. ಅವರಲ್ಲಿ 7,37,936 ಪುರುಷರು, 7,35,817 ಮಹಿಳೆಯರು ಹಾಗೂ 87 ಮಂದಿ ಇತರೆ ಮತದಾರರು ಸೇರಿದ್ದಾರೆ. ಈ ಬಾರಿ 49,358 ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ವಿಶೇಷ ಪರಿಷ್ಕರಣೆ ಸಂದರ್ಭದಲ್ಲಿ 51,368 ಮತದಾರರನ್ನು ಕೈಬಿಡಲಾಗಿದೆ’ ಎಂದು ಹೇಳಿದರು.

ಪ್ರಾತ್ಯಕ್ಷಿಕೆ ಆರಂಭ: ಮತಯಂತ್ರ (ಇವಿಎಂ), ವಿ.ವಿ ಪ್ಯಾಟ್ ಯಂತ್ರಗಳ ಬಳಕೆ ಬಗ್ಗೆ ಮತದಾರರಿಗೆ ಮಾಹಿತಿ ನೀಡಲು, ಜಾಗೃತಿ ಮೂಡಿಸಲು ಈಗಾಗಲೇ ಆಯಾ ಗ್ರಾಮ ಪಂಚಾಯ್ತಿ ಕೇಂದ್ರದಲ್ಲಿ ಪ್ರಾತ್ಯಕ್ಷಿಕೆ ಆಯೋಜಿಸಲಾಗುತ್ತಿದೆ. ಅದಕ್ಕಾಗಿ 84 ತಂಡಗಳನ್ನು ರಚಿಸಲಾಗಿದೆ ಎಂದರು.

ಕಾಸಿಗಾಗಿ ಸುದ್ದಿ ನಿಗಾ: ಮಾಧ್ಯಮಗಳಲ್ಲಿ ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಮೇಲೆ ನಿಗಾ ಇಡಲು, ಜಾಹೀರಾತುಗಳ ಖರ್ಚು–ವೆಚ್ಚದ ಬಗ್ಗೆ ದಾಖಲೆ ಸಂಗ್ರಹಿಸಲು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ವಾರ್ತಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

27 ಚೆಕ್‌ಪೋಸ್ಟ್ ರಚನೆ: ಚುನಾವಣೆ ವೇಳೆ ಭದ್ರತೆಗಾಗಿ ಜಿಲ್ಲೆಯ 27 ಕಡೆ ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗುತ್ತಿದೆ. ಈಗಾಗಲೇ ಆರು ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಪರವಾನಗಿ ಹೊಂದಿ ಬಂದೂಕು ಹೊಂದಿರುವವರಿಗೆ ಅವುಗಳನ್ನು ಮರಳಿಸಲು ಸೂಚಿಸಲಾಗಿದೆ. ಗಣ್ಯರಿಗೆ ಒದಗಿಸಿದ್ದ ಬೆಂಗಾವಲು ಪಡೆಯನ್ನು (ಎಸ್ಕಾರ್ಟ್‌) ವಾಪಸ್ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಇದೇ ವೇಳೆ ತಿಳಿಸಿದರು.

10ರ ನಂತರ ಧ್ವನಿವರ್ಧಕ ಬಳಕೆ ಇಲ್ಲ

ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆಗೆ ನಿಷೇಧ ವಿಧಿಸಲಾಗಿದೆ. ಮದುವೆ ಬಟ್ಟೆ, ಉಡುಗೊರೆ ಖರೀದಿಗೆ ಚುನಾವಣಾ ಅಧಿಕಾರಿಯ ಪೂರ್ವಾನುಮತಿ ಕಡ್ಡಾಯ. ಉತ್ಸವ, ಜಾತ್ರೆ ಮೊದಲಾದ ಸಂದರ್ಭದಲ್ಲೂ ಅಧಿಕಾರಿಗಳ ತಂಡ ನಿಗಾ ಇಡಲಿದೆ.

9731979899ಗೆ ಎಸ್‌ಎಂಎಸ್ ಮಾಡಿ..

ಸಾರ್ವಜನಿಕರು ತಮ್ಮ ವಿಧಾನಸಭಾ ಕ್ಷೇತ್ರ, ಮತಗಟ್ಟೆ ಹಾಗೂ ಇನ್ನಿತರ ವಿವರಗಳನ್ನು ಮನೆಯಲ್ಲಿಯೇ ಕುಳಿತು ಪಡೆಯಲು 9731979899 ಸಂಖ್ಯೆಗೆ ಮತದಾರರ ಗುರುತಿನ ಚೀಟಿಯನ್ನು ಎಸ್‌ಎಂಎಸ್ ಮೂಲಕ ಕಳುಹಿಸಲು ಜಿಲ್ಲಾಧಿಕಾರಿ ತಿಳಿಸಿದರು.

KAEPIC ಸ್ಪೇಸ್ ಬಿಟ್ಟು ಮತದಾರರ ಗುರುತಿನ ಚೀಟಿ ಸಂಖ್ಯೆ ನಮೂದಿಸಿ ಕಳುಹಿಸಿದರೆ ಎಲ್ಲಾ ವಿವರ ದೊರೆಯಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT