ಹಾಸನ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಬ್ಯಾಂಕ್ ಮಿತ್ರಾಸ್ ಸಂಘದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬ್ಯಾಂಕ್ ಶಾಖೆ, ಎಟಿಎಂ ಇಲ್ಲದ ಪ್ರದೇಶಗಳಲ್ಲಿ ಬ್ಯಾಂಕ್ಗಳ ಪ್ರತಿನಿಧಿಯಾಗಿ ಬ್ಯಾಂಕ್ ಮಿತ್ರರು 2006 ರಿಂದ ಕೆಲಸ ಮಾಡುತ್ತಿದ್ದಾರೆ. ಬ್ಯಾಂಕ್ ಮಿತ್ರರ ಮೂಲಕ ತಮ್ಮ ಬ್ಯಾಂಕ್ ಖಾತೆಯಿಂದಆಯಾ ಬ್ಯಾಂಕಿನ ಗ್ರಾಹಕರು ಹಣ ತೆಗೆಯುವುದು ಹಾಗೂ ಜಮಾ ಮಾಡಬಹುದು. ಜತೆಗೆ ಸರ್ಕಾರದಅನೇಕ ಯೋಜನೆಗಳ ಕುರಿತು ಪ್ರಚಾರ ಮಾಡಲಾಗುತ್ತಿದೆ. ಕಮಿಷನ್ ಆಧಾರದಲ್ಲಿ ಕೆಲಸ ಮಾಡುವಬ್ಯಾಂಕ್ ಮಿತ್ರರು ದಿನದ 24 ಗಂಟೆಯೂ ಲಭ್ಯವಿರುತ್ತಾರೆ ಎಂದು ಪ್ರತಿಭಟನಕಾರರು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಮಹೇಶ್ ಮಾತನಾಡಿ, ಬ್ಯಾಂಕ್ ಮಿತ್ರರಿಗೆ ಸೇವಾ ಭದ್ರತೆ ಇಲ್ಲ. ಪಿ.ಎಫ್. ಗ್ರಾಚ್ಯುಟಿ, ವೈದ್ಯಕೀಯ ಹಾಗೂ ಪಿಂಚಣಿ ಸೌಲಭ್ಯ ಇಲ್ಲ. ಮಹಿಳೆಯರಿಗೆ ಹೆರಿಗೆ ರಜೆಯೂ ಇಲ್ಲ. ಒಂದೊಂದು ಬ್ಯಾಂಕಿನಲ್ಲೂ ಒಂದೊಂದು ರೀತಿಯ ಕಮಿಷನ್ ಇರುತ್ತದೆ. ಸುಪ್ರೀಂ ಕೋರ್ಟ್ ಪ್ರಕಾರಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದುಆರೋಪಿಸಿದರು.
ಎಲ್ಲಾ ಬ್ಯಾಂಕ್ಗಳಲ್ಲೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನೀತಿಯಡಿ ಏಕರೂಪ ವೇತನ ಶ್ರೇಣಿ ಜಾರಿ ಮಾಡಬೇಕು. ಗುತ್ತಿಗೆದಾರರು ಬ್ಯಾಂಕ್ ಮಿತ್ರರಿಂದ ಠೇವಣಿ, ಸುರಕ್ಷತಾ ನಿಧಿ ಇತ್ಯಾದಿ ಹೆಸರಿನಲ್ಲಿ ಹಣ ವಸೂಲು ಮಾಡುವುದನ್ನು ನಿರ್ಬಂಧಿಸಬೇಕು. ಈಗಾಗಲೇ ವಸೂಲಿ ಮಾಡಿದ ಹಣವನ್ನು ಬಡ್ಡಿಸಮೇತ ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.
ಗುತ್ತಿಗೆ ಪದ್ಧತಿ ರದ್ದು ಮಾಡಿ ನೇರವಾಗಿ ಬ್ಯಾಂಕ್ಗಳ ಮಾಲೀಕತ್ವದಡಿ ಕೆಲಸ ಮಾಡುವಂತೆ ಮಾಡಬೇಕು. ಬ್ಯಾಂಕ್ ಮಿತ್ರರಿಗೆ ಏಕರೂಪದ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎಂ.ಸಿ.ಡೋಂಗ್ರೆ, ಖಜಾಂಚಿ ಲೋಕೇಶ್ ಗೌಡ, ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಕುಮಾರ್, ಬ್ಯಾಂಕ್ ಮಿತ್ರರಾದ ಎಚ್.ಕೆ.ದೊರೆಸ್ವಾಮಿ, ಗಣೇಶ್ ಇದ್ದರು.