ಹಾಸನ: ಗ್ರಾಮೀಣ ಭಾಗದ ಎಸ್ಎಸ್ಎಲ್ಸಿ ಮಕ್ಕಳಿಗೆ ಪ್ರೋತ್ಸಾಹ ಅಂಕ ನೀಡಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ರಾಜ್ಯದ ಗ್ರಾಮೀಣ ಭಾಗದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆ ಯಿಂದಾಗಿ ಆನ್ಲೈನ್ ತರಗತಿಗಳು ಸರಿಯಾಗಿ ನಡೆದಿಲ್ಲ. ಶ್ರೀಮಂತ, ಬಡ ಹಾಗೂ ಗ್ರಾಮೀಣ ಮತ್ತು ನಗರಗಳ ವಿದ್ಯಾರ್ಥಿಗಳ ನಡುವೆ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಭಯಾನಕ ಕಂದಕ ಸೃಷ್ಟಿಸಿದೆ ಎಂದು ಪ್ರತಿಭಟನಕಾರರು ದೂರಿದರು.
ಈಗಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂಕಗಳು ಡಿಜಿಟಲ್ -ನಾನ್ ಡಿಜಿಟಲ್ ವಿದ್ಯಾರ್ಥಿ ವರ್ಗಗಳ ನಡುವೆ ಅಸಮಾನತೆ ಉಂಟುಮಾಡಿದೆ. ಇಂತಹ ಕಠಿಣ ಸಂದರ್ಭದಲ್ಲಿ ಪರೀಕ್ಷೆ ನಡೆಸಿರುವ ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ಅಂಕ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲಕ್ಷ್ಮಣ್, ಜಿಲ್ಲಾ ಸಂಘಟನಾ ಸಂಚಾಲಕರಾದ ಎಸ್.ಎಲ್. ರಾಜಣ್ಣ, ಮೇಲ್ ರಾಜ್ ಕಲ್ಲಳ್ಳಿ, ಕೇಶವಯ್ಯ, ಕೃಷ್ಣಯ್ಯ, ಗೋವಿಂದರಾಜು, ಕೃಷ್ಣ ದುಮ್ಮಿ, ಶಿವಶಂಕರ್, ಪಾಂಡುರಂಗ, ಧರ್ಮಯ್ಯ ಸೇರಿದಂತೆ ಹಲವರು ಇದ್ದರು.