ಹಾಸನಾಂಬೆ ದರ್ಶನಕ್ಕೆ ಮಳೆ ಅಡ್ಡಿ

ಹಾಸನ: ಮೂರು ದಿನಗಳಿಂದ ಸಂಜೆ ಯಿಂದ ರಾತ್ರಿವರೆಗೂ ಸುರಿಯುತ್ತಿರುವ ಮಳೆ ಹಾಸನಾಂಬ ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ಅಡ್ಡಿ ಉಂಟು ಮಾಡುತ್ತಿದೆ.
ಸೋಮವಾರವೂ ಸಂಜೆ ಗುಡುಗು ಸಹಿತ ಅರ್ಧ ತಾಸು ಬಿರುಸಿನ ಮಳೆಯಾದ ಪರಿಣಾಮ ಸರದಿ ಸಾಲಿನಲ್ಲಿ ದೇವಿ ದರ್ಶನಕ್ಕೆ ನಿಂತಿದ್ದ ಭಕ್ತರು ಸಿಕ್ಕ ಸಿಕ್ಕ ಕಡೆಗೆ ಓಡಿ ಹೋದರು. ಹಲವರು ಮನೆ ಮತ್ತು ಅಂಗಡಿಗಳ ಎದುರು ರಕ್ಷಣೆ ಪಡೆದರು. ಕೆಲವರು ತೋಯ್ದುಕೊಂಡೇ ದರ್ಶನ ಪಡೆದರು.
ಕೋವಿಡ್ನಿಂದಾಗಿ ಕಳೆದ ವರ್ಷ ದೇವಿ ದರ್ಶನಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿಂದ ದೇವಾಲಯದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ಈಗಾಗಲೇ ಐದು ಜಾತ್ರಾ ಮಹೋತ್ಸವ ದಿನ ಪೂರೈಸಿದೆ. ಮಳೆ ಅಬ್ಬರ ಕಡಿಮೆಯಾದರೆ ಉಳಿದ ದಿನ ದೇವಿ ದರ್ಶನಕ್ಕೆ ಅವಕಾಶ ಸಿಗಲಿದೆ. ಮಳೆಯ ಕಾರಣದಿಂದ ಸ್ಥಳೀಯ ಜನರು ಬೆಳಿಗ್ಗೆಯೇ ದೇವಿ ದರ್ಶನ ಪಡೆಯುತ್ತಿದ್ದಾರೆ.
ಸೋಮವಾರ ರಜಾ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಜಿಲ್ಲೆಗಳಿಂದ ಭಕ್ತರು ಬಂದಿದ್ದರು. ವಿಶೇಷ ಟಿಕೆಟ್ ದರ್ಶನದ ಸಾಲುಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚು ಕಂಡು ಬಂತು.
ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಹಾಗೂ ಇತರೆ ಮಾಹಿತಿ ಪರಿಶೀಲಿಸಲಾಗುತ್ತಿದೆ. ಲಸಿಕೆ ಪಡೆಯದವರಿಗೆ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸ್ಥಳದಲ್ಲಿಯೇ ಲಸಿಕೆ ನೀಡಲು ಕೇಂದ್ರ ತೆರೆಯಲಾಗಿದೆ. ಆದರೆ, ಕೆಲವರು ಲಸಿಕೆ ಪಡೆದ ಮೆಸೇಜ್ ಇದೆ. ಮೊಬೈಲ್ ತಂದಿಲ್ಲ ಎಂಬ ನಾನಾ ಕಾರಣ ಹೇಳಿ ದೇವಿ ದರ್ಶನ ಪಡೆಯುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.