ಹಾಸನ : ರೈತರ ಸಾಲ ಮನ್ನಾ ಸಂಬಂಧಿಸಿದಂತೆ ಹತ್ತು ದಿನದೊಳಗೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ಗಳು ರೈತರ ದಾಖಲೆಗಳನ್ನು ಸಂಗ್ರಹಿಸಿ ನಿಗದಿತ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.
ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದರು. ಸಾಲಮನ್ನಾ ಯೋಜನೆ ಜಾರಿಯಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
1 00ಕ್ಕಿಂತ ಕಡಿಮೆ ಖಾತೆ ಇರುವ ಕಡೆ ಎರಡನೇ ದಿನಗಳಲ್ಲಿ ಪೂರ್ಣಗೊಳಿಸಬೇಕು. 1000 ಮತ್ತು ಅದಕ್ಕೂ ಹೆಚ್ಚಿನ ಖಾತೆಗಳಿರುವ ಕಡೆ ಇತರೆಡೆಯಿಂದ ಹೆಚ್ಚುವರಿ ಸಿಬ್ಬಂದಿ ನೇಮಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ತಹಶೀಲ್ದಾರರು ಎಲ್ಲಾ ಬ್ಯಾಂಕ್ ಗಳೊಂದಿಗೆ ಸಂಪರ್ಕ ಇರಿಸಿಕೊಂಡು ಶೀಘ್ರ ರೈತರ ಮಾಹಿತಿಗಳ ಸಂಗ್ರಹ ಮತ್ತು ಅಪ್ ಲೋಡ್ ಕಾರ್ಯ ಮುಗಿಸಬೇಕು. ಈ ಅವಧಿಯಲ್ಲಿ ರಜೆ ಪಡೆಯದೆ ಗುರಿಸಾಧನೆ ಮಾಡಬೇಕು ಎಂದು ಹೇಳಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಎಲ್ಲಾ ಬ್ಯಾಂಕ್ ಶಾಖೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿ ಮೇಲ್ವಿಚಾರಣೆ ನಡೆಸಬೇಕು. ಯಾವುದೇ ಬ್ಯಾಂಕ್ ಗಳಲ್ಲಿ ವಿನಾಕಾರಣ ನೆಪ ಹೇಳಿ ಸಾಲ ಮನ್ನಾ ದಾಖಲೆಗಳ ಸಂಗ್ರಹ ವಿಳಂಬ ಮಾಡುವಂತಿಲ್ಲ. ಹಾಗೇನಾದರೂ ಆದಲ್ಲಿ ಮುಖ್ಯ ಮಹಾ ಪ್ರಬಂಧಕರಿಗೆ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪವಿಭಾಗಾಧಿಕಾರಿಗಳಾದ ಲಕ್ಷ್ಮಿಕಾಂತರೆಡ್ಡಿ, ಎಚ್.ಎಲ್.ನಾಗರಾಜ್, ಜಂಟಿ ಕೃಷಿ ನಿರ್ದೇಶಕ ಮಧುಸೂಧನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂಜಯ್ ಮತ್ತು ಕಾಫಿ ಮಂಡಳಿ ಅಧಿಕಾರಿಗಳು ಇದ್ದರು.