ಚನ್ನರಾಯಪಟ್ಟಣ: ಜಿಲ್ಲೆಯ ರೈತರ ಹಿತದೃಷ್ಟಿಯಿಂದ ರಜಾ ದಿನಗಳಲ್ಲೂ ಕೊಬ್ಬರಿ ಖರೀದಿ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ಪಟ್ಟಣದಲ್ಲಿ ಕೊಬ್ಬರಿ ಖರೀದಿ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ನೋಂದಣಿ ಮಾಡಿಸಲು ಸರದಿ ಸಾಲಿನಲ್ಲಿ ನಿಂತಿದ್ದ ರೈತರೊಂದಿಗೆ ಸಮಾಲೋಚಿಸಿದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದರು. ಇನ್ನೂ 4-5 ದಿನ ನೋಂದಣಿ ಪ್ರಕ್ರಿಯೆ ಇರುತ್ತದೆ. ರಜೆ ದಿನಗಳಲ್ಲಿಯೂ ನೋಂದಣಿ ಮಾಡಲಾಗುತ್ತದೆ. ಯಾವುದೇ ರೈತರು ಆತಂಕ ಪಡುವ ಅಗತ್ಯ ಇಲ್ಲ. ಎಲ್ಲಾ 13 ಕೇಂದ್ರಗಳಿಗೆ ಭೇಟಿ ನೀಡಲಾಗಿದೆ. ನೋಂದಣಿ ಸುಗಮವಾಗಿ ನಡೆಯುತ್ತಿದೆ. ಮೊದಲ ದಿನ ಮಾತ್ರ ಅಡಚಣೆಯಾಗಿತ್ತು ಎಂದರು.
ಮಹಿಳೆಯರಿಗೆ ಪ್ರತ್ಯೇಕ ಸರದಿ ಸಾಲು ವ್ಯವಸ್ಥೆ ಒದಗಿಸಲಾಗಿದೆ. ನೋಂದಣಿ ಪ್ರಕ್ರಿಯೆ ಮುಗಿದ ತಕ್ಷಣ ಕೊಬ್ಬರಿ ಖರೀದಿಗೆ ಅವಕಾಶ ಒದಗಿಸಲಾಗುವುದು. ಕೊಬ್ಬರಿ ಖರೀದಿ ಕೇಂದ್ರದಲ್ಲಿ ನೆರಳು, ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಎಲ್ಲಾ ಕೇಂದ್ರಗಳಲ್ಲಿ ನಿತ್ಯ ರೈತರಿಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯ ಸಹಕಾರ ಮಾರಾಟಮಹಾ ಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ, ಮಾಜಿ ಉಪಾಧ್ಯಕ್ಷ ಸಿ.ಜಿ. ಜಗದೀಶ್, ಎಪಿಎಂಸಿ ಮಾಜಿ ಅಧ್ಯಕ್ಷ .ಎಂ.ಬಿ. ತಿಮ್ಮೇಗೌಡ ಭಾಗವಹಿಸಿದ್ದರು.