ಗಂಡಸಿ: ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾಗದರಹಿತ ವಹಿವಾಟು ನಡೆಸಲು ಮುಂದಾಗಿರುವ ಹಾಲು ಒಕ್ಕೂಟ, ಇದೀಗ ಹಾಲು ಉತ್ಪಾದಕರಿಗೆ ಎಸ್ಎಂಎಸ್ ಸಂದೇಶ ಕಳುಹಿಸುವ ವ್ಯವಸ್ಥೆ ಜಾರಿಗೊಳಿಸಿದೆ.
ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಹಾಸನ ಹಾಲು ಒಕ್ಕೂಟದಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಸ್ಎಂಎಸ್ ಸಂದೇಶ ರವಾನಿಸುವ ಸೇವೆಗೆ ಇಲ್ಲಿನ ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯನಿರ್ವಹಣಾಧಿಕಾರಿ ಬೀರಲಿಂಗಪ್ಪ, ಕಾಗದರಹಿತ ವಹಿವಾಟು ನಡೆಸುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿದೆ. ನಿತ್ಯ ಸಂಘಕ್ಕೆ ಹಾಲು ಹಾಕುವ ಹಾಲು ಉತ್ಪಾದಕ ರೈತರಿಗೆ, ಹಾಲು ಹಾಕಿದ ಒಂದೇ ನಿಮಿಷದಲ್ಲಿ ಹಾಲಿನ ತೂಕ, ದರ, ಕೊಬ್ಬಿನ ಅಂಶ ಸೇರಿದಂತೆ ಎಲ್ಲ ಮಾಹಿತಿಯನ್ನು ಎಸ್ಎಂಎಸ್ ಮೂಲಕ ರೈತರಿಗೆ ರವಾನಿಸಲಾಗುತ್ತದೆ ಎಂದು ತಿಳಿಸಿದರು.
ವಾರಕ್ಕೆ ಒಂದು ಬಾರಿ, ಸಂಗ್ರಹವಾದ ಹಾಲಿನ ಮೊತ್ತದ ವಿವರವನ್ನು ಎಸ್ಎಂಎಸ್ ಮೂಲಕ ಉತ್ಪಾದಕರಿಗೆ ಕಳುಹಿಸಲಾಗುವುದು ಎಂದರು.