ಆಲೂರು: ತಾಲ್ಲೂಕಿನ ಹಾಂಜಿಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ಗಲಾಟೆಯಲ್ಲಿ ಅಮಾನುಷವಾಗಿ ಕೊಲೆಯಾದ ದಲಿತ ವ್ಯಕ್ತಿ ಬಸವೇಶಪುರ ಗ್ರಾಮದ ರಾಮು ಮನೆಗೆ ಸೋಮವಾರ ಶಾಸಕ ಎಚ್.ಕೆ ಕುಮಾರಸ್ವಾಮಿ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
‘ಈ ಕೊಲೆಯಾವುದೇ ಉದ್ದೇಶಪೂರ್ವಕವಾಗಿ ನಡೆದಿಲ್ಲ ಎಂಬುದು ಮಲ್ನೊಟಕ್ಕೆ ಕಂಡುಬಂದಿದ್ದು, ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ. ಕೊಲೆಗೀಡಾದ ವ್ಯಕ್ತಿ ಕುಟುಂಬಕ್ಕೆ ಸರ್ಕಾರ ₹ 8 ಲಕ್ಷ ಪರಿಹಾರ ನಿಗದಿಗೊಳಿಸಿದ್ದು, ಈಗಾಗಲೇ ₹ 4.5 ಲಕ್ಷ ನೀಡಲಾಗಿದೆ. ಉಳಿದ ಹಣವನ್ನು ಶೀಘ್ರದಲ್ಲಿಯೇ ನೀಡಲಾಗುವುದು’ ಎಂದರು.
‘ಈ ರೀತಿಯ ಘಟನೆ ನಮ್ಮ ತಾಲ್ಲೂಕಿನಲ್ಲಿ ನಡೆದಿರುವುದು ನನಗೆ ತುಂಬಾ ಬೇಸರವನ್ನುಂಟು ಮಾಡಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅಪರಾಧಕ್ಕೆ ಕಾರಣರಾದ ಹಾಗೂ ಅಪರಾಧ ಎಸಗಿದವರನ್ನು ಶೀಘ್ರವೇ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.
ಕೊಲೆ ಆರೋಪಿ ಮಹೇಶ್ನ ಮನೆಗೆ ಭೇಟಿ ನೀಡಿ ಹಾನಿಯಾಗಿರುವ ವಸ್ತುಸ್ಥಿತಿಯನ್ನು ಶಾಸಕರು ಪರಿಶೀಲಿಸಿದರು.
ಜೆ.ಡಿ.ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಬೈರಾಪುರ ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದ್ರಸ್ವಾಮಿ, ತಾ.ಪಂ. ಉಪಾಧ್ಯಕ್ಷೆ ನಂದಿನಿ ದೊರೆಸ್ವಾಮಿ, ದಲಿತ ಮುಖಂಡರಾದ ರಂಗಯ್ಯ ಹಾಗೂ ಗ್ರಾಮಸ್ಥರು ಇದ್ದರು.