ಚನ್ನರಾಯಪಟ್ಟಣ: ಅ.10ರೊಳಗೆ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೆ.28ಕ್ಕೆ ಅಗ್ನಿ ಪ್ರದೀಪನ ನೆರವೇರಿಸಲಾಗುವುದು. ಅ.10 ರೊಳಗೆ ಕಾರ್ಖಾನೆ ಆರಂಭಿಸಲಾಗುವುದು. ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ₹ 160-170 ಕೋಟಿ ಸಾಲ ತಂದು ಆಧುನೀಕರಣ ಕೈಗೊಂಡಿದ್ದಾರೆ’ ಎಂದರು.
ಕಾರ್ಖಾನೆಯ ಆಧುನೀಕರಣ ಕಾಮಗಾರಿ ಕೈಗೊಳ್ಳುತ್ತಿದ್ದಾಗ ಈ ಭಾಗದ ಕಬ್ಬನ್ನು ಕೆ.ಎಂ.ದೊಡ್ಡಿ ಕಾರ್ಖಾನೆಗ ಸಾಗಿಸುವ ಮೂಲಕ ಕಬ್ಬು ಬೆಳೆಗಾರರಿಗೆ ನೆರವಾಗಿದ್ದೇವೆ. ಆಗಾಗ್ಗೆ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಸಭೆ ಕರೆದು ಶೀಘ್ರವಾಗಿ ಕಾರ್ಖಾನೆಯಲ್ಲಿ ಕಬ್ಬು ಅರೆಯುವಂತೆ ಚಾಮುಂಡೇಶ್ವರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
‘ಕೆಲವರು ಈ ವಿಚಾರದಲ್ಲಿ ರಾಜ ಕೀಯ ಅಪ್ರಬುದ್ಧತೆಯಿಂದ ಮನಸಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ ಅವರ ಹೆಸರನ್ನು ಪ್ರಸ್ತಾಪಿಸದೆ ಟೀಕಿಸಿದರು.
ಹಿರೀಸಾವೆ- ಜುಟ್ಟನಹಳ್ಳಿ ಏತ ನೀರಾವರಿ ಯೋಜನೆಯ ಎಡಕಾ ಲುವೆಯ ಮೂಲಕ ಕೆಂಪಿನಕೋಟೆ, ಚನ್ನೇನಹಳ್ಳಿ, ಮರಿಶೆಟ್ಟಿಹಳ್ಳಿ, ಮತಿಘಟ್ಟ ಕೆರೆಗೆ ಮುಂದಿನ ತಿಂಗಳು ನೀರು ಹರಿಸಲಾಗುವುದು. ಬಲಕಾಲುವೆ ಮೂಲಕ ನೀರು ಹರಿಸುವ ಭಾಗದಲ್ಲಿ 2-3 ಕಡೆ ಎಂಬಾಕ್ ಮೆಂಟ್ ನಿರ್ಮಿಸಬೇಕಿದೆ. ಬಳಿಕ ಹೊಸಹಳ್ಳಿ, ಸುಂಡಹಳ್ಳಿ ಕೆರೆಗೆ ನೀರು ತುಂಬಿಸಲಾಗುವುದು. ಮುಂದಿನ ಹಂಗಾಮಿನಲ್ಲಿ ಚಲ್ಯ, ಯಗಟಿಕೆರೆ ಮತ್ತು ದಡಿಘಟ್ಟ ಗ್ರಾಮದ ಕೆರೆಗೆ ನೀರು ಹರಿಸಲಾಗುವುದು. ಈ ಯೋಜನೆಗೆ ಅರಣ್ಯ ಇಲಾಖೆಯ ಜಮೀನಿನಲ್ಲಿ ಕಾಲುವೆ ನಿರ್ಮಿಸಬೇಕಿದ್ದು, ಅದಕ್ಕೆ ಪರ್ಯಾಯವಾಗಿ ಅರಸೀಕೆರೆ ತಾಲ್ಲೂಕು ಬಾಗೇಶಪುರದಲ್ಲಿ 9 ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆ ಪ್ರಗತಿಯಲ್ಲಿದ್ದು, 3.60 ಲಕ್ಷ ಪ್ಲಾಟ್ಗಳ ಪೈಕಿ 2.76 ಲಕ್ಷ ಪ್ಲಾಟ್ಗಳಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಳಿಸಲಾಗಿದೆ ಎಂದ ಅವರು, ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆ ಗುಣಮಟ್ಟದ ರಾಗಿ ನೀಡಲಾಗುತ್ತಿದೆ. ಕೂಡಲೇ ಗುಣಮಟ್ಟದ ರಾಗಿ ವಿತರಿಸಲು ಕ್ರಮ ತೆಗೆ ದುಕೊಳ್ಳುವಂತೆ ದೂರವಾಣಿ ಮೂಲಕ ಅಧಿಕಾರಿಗಳ ಗಮನಕ್ಕೆ ತಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.