ಹಾಸನ: ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂಬುದನ್ನು ಮರೆಯಬಾರದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು ಹೇಳಿದರು.
ನಗರದ ಕುhasaರುಹಿನ ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಟ್ಟಕಡೆಯ ಸಮಾಜದವರನ್ನು ಗುರುತಿಸಿ ಬೂತ್ ಮಟ್ಟದಲ್ಲಿ ಜವಾಬ್ದಾರಿ ನೀಡಬೇಕು. ಯಾವುದೇ ಕಾರಣಕ್ಕೂ ಸಮುದಾಯವನ್ನು ಕಡೆಗಣಿಸಬಾರದು. ಪ್ರತಿ ತಿಂಗಳು ಕಾರ್ಯಕಾರಿಣಿ ಸಭೆ ನಡೆಸಬೇಕು ಎಂದು ತಿಳಿಸಿದರು.
ಫೆ.27 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಎಲ್ಲ ಮಾಹಿತಿ ನೀಡಬೇಕಿದೆ. ಪದಾಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಪಕ್ಷ ಸಂಘಟನೆ ಕಡೆ ಗಮನ ಹರಿಸಬೇಕು. ಮುಂದೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಪ್ರತಿ ಬೂತ್ನಲ್ಲಿ ಮಹಿಳೆಯರಿಗೆ ಶೇಕಡಾ 30ರಷ್ಟು ಮೀಸಲಾತಿ ನೀಡಬೇಕು. ಮೂರು ಬಾರಿ ಸಭೆಗೆ ಅವರು ಗೈರು ಹಾಜರಾದರೆ, ಮತ್ತೊಬ್ಬರಿಗೆ ಅವಕಾಶ ನೀಡಬೇಕು ಎಂದು ಸೂಚಿಸಿದರು.
ಏಳು ವಿಧಾನಸಭಾ ಕ್ಷೇತ್ರಗಳ 11 ಮಂಡಲಗಳ ಪ್ರವಾಸ ಮಾಡಲಾಗಿದೆ. ಎರಡು ತಿಂಗಳಿಗೊಮ್ಮೆ ಶ್ರಮದಾನ ಮಾಡಬೇಕು. ಅಂಗನವಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಮೂಲ ಸೌಲಭ್ಯ ಒದಗಿಸುವುದರ ಜತೆ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ಸಲಹೆ ನೀಡಿದರು.
ಮಡಿವಾಳ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಆಂಜನಪ್ಪ ಮಾತನಾಡಿ, ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಇಲ್ಲದ ಕಾರಣ ಮಡಿವಾಳ ಸಮಾಜ ಹಿಂದುಳಿದಿದೆ. ಸಮುದಾಯದವರ ಕಷ್ಟವನ್ನು ಯಾರು ಕೇಳುತ್ತಿಲ್ಲ. ಅದೇ ರೀತಿ ಸವಿತಾ ಸಮಾಜದವರಿಗೆ ಸರ್ಕಾರದ ಸೌಲಭ್ಯ ದೊರೆಯುತ್ತಿಲ್ಲ. ಇದಕ್ಕೆ ಕಾರಣ ಸಂಘಟನೆ ಕೊರತೆ ಎಂದರು.
ಇದೇ ವೇಳೆ ಬಿಜೆಪಿ ನಗರಸಭೆ ಸದಸ್ಯರಾದ ಆರ್.ಸಂತೋಷ್, ದಯಾನಂದ, ಸವಿತಾ ಕೃಷ್ಣಮೂರ್ತಿ, ಸುಜಾತ ಮಹೇಶ್, ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಮುಖಂಡ ಪುಟ್ಟಸ್ವಾಮಿ ಶೆಟ್ಟಿ ಅವರು ನರೇಂದ್ರ ಬಾಬು ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಪ್ರಭಾರಿ ಉಮೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಲೋಹಿತ್ ಜಂಬರಗಿ, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ಯತೀಶ್, ಕೊಟ್ರೇಶ್ ಇದ್ದರು.