ಅರಕಲಗೂಡು: ಪಟ್ಟಣದ ಪ್ರಸನ್ನ ಗಣಪತಿ ಸೇವಾ ಸಮಿತಿ 52ನೇ ವರ್ಷದ ಗಣೇಶೋತ್ಸವ ನಿಮಿತ್ತ ಭಾನುವಾರ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ಹಾಗೂ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಪರಿಸರ ಗಣೇಶ ಮೂರ್ತಿಗಳ ತಯಾರಿಕೆ ಕುರಿತು ವಿಗ್ರಹ ಶಿಲ್ಪಿಗಳಾದ ವಿಶ್ವೇಶ್ವರಯ್ಯ ಮತ್ತು ತಿಲಕ್ ಹಾಗೂ ಪೇಪರ್ ಹಾಳೆಗಳಲ್ಲಿ ವಿವಿಧ ರೂಪದ ಗಣಪತಿ ಚಿತ್ರಗಳನ್ನು ಮೂಡಿಸುವ ಕುರಿತು ಕಲಾವಿದ ಪ್ರವೀಣ್ ಕುಮಾರ್ ತರಬೇತಿ ಕಾರ್ಯಾಗಾರ ನಡೆಸಿದರು.
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಮನೆ ಮದ್ದುಗಳ ಕುರಿತು ವಿಪ್ರ ಮಹಿಳಾ ಬಳಗದ ಸದಸ್ಯರಾದ ಪಿ.ಎಸ್ ಸುಧಾ, ಡಿ.ಟಿ.ಸವಿತಾ, ಜಿ.ಕೆ. ಉಮಾ ಮಾಹಿತಿ ನೀಡಿದರು.
ಮಹಿಳೆಯರಿಗೆ ತೆಂಗಿನ ಕಾಯಿಗೆ ಕಲ್ಲಿನಿಂದ ಹೊಡೆದು ಒಡೆಯುವ ಸ್ಪರ್ಧೆ, ಸಂಗೀತ ಕುರ್ಚಿ, ಮಡಕೆ ಒಡೆಯುವ ಸ್ಪರ್ಧೆ, ಪುರುಷರಿಗೆ ನಿಧಾನಗತಿಯ ಸೈಕಲ್ ಮತ್ತು ಬೈಕ್ ಚಾಲನಾ ಸ್ಪರ್ಧೆ ನಡೆಸಲಾಯಿತು.
ಶನಿವಾರ ಊಟದ ಎಲೆ ಹಚ್ಚುವುದು, ಮಣ್ಣಿನ ಮಡಕೆ ತಯಾರಿಸುವುದು, ಹೂ ಕಟ್ಟುವುದು, ಸ್ಥಳದಲ್ಲೇ ಚಿತ್ರ ಬಿಡಿಸುವ ಮತ್ತು ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು.
ಗಣಪತಿ ಹೋಮ ಇಂದು: ಸಂಷ್ಟಹರ ಚತುರ್ಥಿ ಪ್ರಯುಕ್ತ ಸೋಮವಾರ ಮಹಾ ಗಣಪತಿ ಹೋಮ ಹಾಗೂ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಏರ್ಪಡಿಸಲಾಗಿದೆ.
ಅರಕಲಗೂಡು ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಣ್ಣಿನಿಂದ ಗಣಪತಿ ತಯಾರಿಸುವುದನ್ನು ಶಿಲ್ಪಿಗಳಾದ ತಿಲಕ್ ಮತ್ತು ವಿಶ್ವೇಶ್ವರಯ್ಯ ಪ್ರಾತ್ಯಕ್ಷಿತೆ ಮೂಲಕ ತೋರಿಸಿದರು