ಬೇಲೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಬೇಲೂರು ಗೆಂಡೇಹಳ್ಳಿ ರಸ್ತೆಯಲ್ಲಿರುವ ಹನುಮಂತನಗರದಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
ಹೂವಮ್ಮ (58) ಮೃತಪಟ್ಟವರು. ಮೊಮ್ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದಿಳಿದು, ಮನೆ ಕಡೆಗೆ ತೆರಳುತ್ತಿದ್ದಾಗ ಗೆಂಡೇಹಳ್ಳಿ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆಗೆ / ಸ್ಪಂದಿಸಲಿಲ್ಲ.
‘ಅಪಘಾತವಾಗಿದ್ದರೂ ಚಾಲಕ ಕಾರು ನಿಲ್ಲಿಸದೆ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಶಾಸಕರು ಕಾರಲ್ಲಿ ಇದ್ದರೂ, ಇರಲಿಲ್ಲ ಎಂಬುದಾಗಿ ಸುಳ್ಳು ಹೇಳುತ್ತಿದ್ದಾರೆ’ ಎಂದು ನಿವಾಸಿಗಳು ಆರೋಪಿಸಿದರು.
‘ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತಿದೆ’ ಎಂದು ಬೇಲೂರು ಠಾಣೆ ಇನ್ಸ್ಪೆಕ್ಟರ್ ಯೋಗೀಶ್ ತಿಳಿಸಿದರು.
ಶಾಸಕರು ಇರಲಿಲ್ಲ: ‘ಅಪಘಾತವಾದಾಗ ಕಾರಿನಲ್ಲಿ ಶಾಸಕರು ಇರಲಿಲ್ಲ. ಚಾಲಕ ಕಾರನ್ನು ಸರ್ವಿಸ್ ಮಾಡಿಸಲು ತೆಗೆದುಕೊಂಡು ಹೋಗುವಾಗ ಅಪಘಾತ ನಡೆದಿದೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಹೇಳಿದರು.