ಹಾಸನ: ಸಕಲೇಶಪುರ ತಾಲ್ಲೂಕು ಅತ್ತಿಹಳ್ಳಿಯ ಪರಮೇಶ್ ಎಂಬುವವರ ಮನೆಯಲ್ಲಿ ದನಕರುಗಳ ಜತೆಯಲ್ಲೇ ಸುಮಾರು ಎರಡು ವರ್ಷಗಳಿಂದ ವಾಸವಾಗಿದ್ದ ಕಡವೆಯನ್ನು ಬುಧವಾರ ಅವರು ಅರಣ್ಯ ಇಲಾಖೆಗೆ ಒಪ್ಪಿಸಿದರು. ಇಲಾಖೆ ಸಿಬ್ಬಂದಿ ಅದನ್ನು ಗೆಂಡೆಕಟ್ಟಡ ಅರಣ್ಯದಲ್ಲಿ ಬಿಟ್ಟಿದ್ದಾರೆ.
ಸಣ್ಣ ಮರಿ ಇದ್ದಾಗ ತಮ್ಮ ಮನೆಗೆ ಬಂದು ಸೇರಿದ್ದ ಕಡವೆಯನ್ನು ಪರಮೇಶ್ ಅವರು ದನಕರುಗಳ ಜತೆಯಲ್ಲೇ ಸಾಕಿದ್ದರು. ಹಸುಗಳ ಜತೆಯಲ್ಲೇ ಅದು ಕಾಡಿಗೆ ಹೋಗಿ ಮೇಯ್ದು ಬರುತ್ತಿತ್ತು.
ಕಾಡುಪ್ರಾಣಿಯನ್ನು ಮನೆಯಲ್ಲಿಟ್ಟುಕೊಂಡಿರುವ ಬಗ್ಗೆ ಸ್ಥಳೀಯ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಅರಣ್ಯ ಇಲಾಖೆಯ ಸಿಬ್ಬಂದಿಗೂ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮುಂದೆ ಯಾವುದೇ ಸಮಸ್ಯೆ ಬರಬಾರದು ಎಂಬ ಉದ್ದೇಶದಿಂದ ಪರಮೇಶ್ ಅವರು ಗುರುವಾರ ಕಡವೆಯನ್ನು ಇಲಾಖೆಗೆ ಒಪ್ಪಿಸಿದ್ದಾರೆ. ಸಕಲೇಶಪುರದಿಂದ ವಾಹನದಲ್ಲಿ ಹಾಸನಕ್ಕೆ ತಂದಿದ್ದ ಈ ಕಡವೆಯನ್ನು ಗೆಂಡೆಕಟ್ಟೆ ಅರಣ್ಯಧಾಮದಲ್ಲಿ ಬಿಡಲಾಯಿತು.