ಆಲೂರು: ಪ್ರಯಾಣಿಕರೊಬ್ಬರ ಜತೆ ಕೆಎಸ್ಆರ್ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಆಲೂರು ಪಟ್ಟಣದ ಕೆಇಬಿ ವೃತ್ತದಲ್ಲಿ ಬಸ್ ತಡೆದು ಬುಧವಾರ ಪ್ರತಿಭಟನೆ ನಡೆಸಿದರು.
ಮಂಗಳೂರು ಡಿಪೋಗೆ ಸೇರಿದ ಸಾರಿಗೆ ಸಂಸ್ಥೆ ಬಸ್ ಹಾಸನ ಪಟ್ಟಣಕ್ಕೆ ಬರದೆ ಬೈಪಾಸ್ ಮುಖಾಂತರ ಬಂದ ಬಗ್ಗೆ ಪ್ರಯಾಣಿಕ ಲೋಕೇಶ್ ನಿರ್ವಾಹಕರನ್ನು ಪ್ರಶ್ನಿಸಿದರು. ಆಗ ಚಾಲಕ ಮತ್ತು ನಿರ್ವಾಹಕರು ಸಮರ್ಪಕ ಉತ್ತರ ನೀಡದೆ ಅನುಚಿತವಾಗಿ ವರ್ತಿಸಿದ್ದಾರೆ. ಆಗ ಸಾರ್ವಜನಿಕರು ಕೆಇಬಿ ವೃತ್ತದ ಬಳಿ ಕೆಲ ಕಾಲ ಬಸ್ ತಡೆದು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮರ್ಪಕ ಉತ್ತರ ನೀಡುವವರೆಗೂ ಬಸ್ ಚಲಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಪ್ರತಿದಿನವೂ ಮಂಗಳೂರು ಹಾಗೂ ಪುತ್ತೂರು ಡಿಪೋ ಚಾಲಕರು ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದಾರೆ. ಆದ್ದರಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಸಂಸ್ಥೆ ಅಧಿಕಾರಿಗಳಾದ ಮುತ್ತಯ್ಯ ಮತ್ತು ಮಂಜುನಾಥ್ ಸ್ಥಳಕ್ಕೆ ಬಂದು, ಪ್ರತಿಭಟನಕಾರರ ಮನವೊಲಿಸಿದರು. ನಿಯಮಬಾಹಿರವಾಗಿ ವರ್ತಿಸಿದ ಚಾಲಕ ಹಾಗೂ ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಂತರ ಪ್ರತಿಭಟನೆ ಅಂತ್ಯಗೊಂಡಿತು. ಸಬ್ ಇನ್ಸ್ಪೆಕ್ಟರ್ ಜಯಲಕ್ಷ್ಮೀ ಹಾಗೂ ಸಿಬ್ಬಂದಿ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡರು.