ಹಾಸನ: ನಗರಸಭೆಯಲ್ಲಿ ಗುತ್ತಿಗೆ ಪೌರಕಾರ್ಮಿಕರ ಮೇಲಿನ ದೌರ್ಜನ್ಯ ವಿರೋಧಿಸಿ ಫೆ. 14 ರಿಂದ ಡಿ.ಸಿ ಕಚೇರಿ ಎದುರು ‘ಅಮರಣಾಂತ ಉಪವಾಸ ಸತ್ಯಾಗ್ರಹ’ ನಡೆಯಲಿ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ, ‘ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್ ದಲಿತ ವಿರೋಧಿ ಧೋರಣೆ ತಳೆದಿದ್ದಾರೆ. ಶಾಸಕರೂ ತನ್ನ ಸಹೋದರ ಅನಿಲ್ ಕುಮಾರ್ ಪರ ನಿಂತಿದ್ದಾರೆ ಎಂದು ಟೀಕಿಸಿದರು.
ಕೆಲಸ ನಿರಾಕರಿಸಿದ ಕಾರ್ಮಿಕರಿಗೆ ಬಾಕಿ ವೇತನ ಸಹಿತ ಕೆಲಸ ನೀಡಬೇಕು. ಕಾರ್ಮಿಕರಿಗೆ ಕನಿಷ್ಟ ಸೌಲಭ್ಗಗಳನ್ನು ಒದಗಿಸುತ್ತಿಲ್ಲ. ಕೆಲಸದಿಂದ ಏಕಾಏಕಿ ತೆಗೆಯುವ ಪ್ರವೃತ್ತಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕನಿಷ್ಟ ವೇತನ, 7 ತಿಂಗಳ ಬಾಕಿ ವೇತನ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಸೌಲಭ್ಯ ನೀಡಬೇಕು. ಇಎಸ್ಐ ಮತ್ತು ಇಪಿಎಫ್ (ಭವಿಷ್ಯ ನಿಧಿ) ಸೌಲಭ್ಯ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಉಪಾಧ್ಯಕ್ಷ ಜಿ.ಪಿ. ಸತ್ಯನಾರಾಯಣ, ಕಾರ್ಯದರ್ಶಿ ಕೆ.ಎಸ್. ಮಂಜುನಾಥ್, ಖಜಾಂಚಿ ಎಂ.ಬಿ. ಪುಷ್ಪಾ, ಕೆ.ಟಿ.ಹೊನ್ನೇಗೌಡ ಇದ್ದರು.