ಸಕಲೇಶಪುರ: ಶಬರಿ ಮಲೆಗೆ ತೆರಳಿ ಊರಿಗೆ ಹಿಂತಿರುಗುತ್ತಿದ್ದ, ಭಕ್ತರೊ ಬ್ಬರು ವಾಹನದಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಮೀಪದ ಶಿರಾಡಿ ಘಾಟ್ನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕು ದೊಡ್ಡನೇರ್ಲೆ ಗ್ರಾಮದ ಕುಮಾರ (35) ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಇವರು ಪತ್ನಿಯನ್ನು ಅಗಲಿದ್ದಾರೆ. ಮಾರನಹಳ್ಳಿ ಪೊಲೀಸ್ ಔಟ್ ಪೋಸ್ಟ್ ವ್ಯಾಪ್ತಿಯ ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ ಸಕಲೇಶಪುರದತ್ತ ಬರುತ್ತಿದ್ದಾಗ, ವೇಗವಾಗಿ ಎದುರಿನಿಂದ ಬಂದ ಟ್ಯಾಂಕರ್ ಲಾರಿಯೊಂದರಿಂದ ತಪ್ಪಿಸಿಕೊಳ್ಳಲು ಜೀಪು ರಸ್ತೆ ಬದಿಗೆ ಹೋದಾಗ ಭಾರಿ ಆಳದ ಗುಂಡಿಗೆ ಜೀಪು ನೆಗೆದು ಹಿಂಬದಿಯಿದ್ದ ಕುಮಾರ್ ಕೆಳಗ ಬಿದ್ದು ತೀವ್ರ ಅಸ್ವಸ್ಥಗೊಂಡರು. ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.