ಹಾವೇರಿ: ಬಂಜಾರ ಸಮುದಾಯದ ಮುಖಂಡ, ಮಾಜಿ ಸಚಿವರೂ ಆದ ರುದ್ರಪ್ಪ ಲಮಾಣಿ ಅವರ ವಿರುದ್ಧ ಶಾಸಕ ನೆಹರು ಓಲೇಕಾರ ಅವರು ಮಾಡಿರುವ ಆಧಾರ ರಹಿತ ಆರೋಪ ಖಂಡನೀಯ. ಶಾಸಕರ ವಿರುದ್ಧ ಮುಖ್ಯಮಂತ್ರಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು. ಲಮಾಣಿಯವರು ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದಾರೆ. ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಿದ್ದಾರೆ. ಹೆಣ್ಣು ಮಕ್ಕಳ ಮಾರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಶಾಸಕರು ಮಾಡಿದ್ದಾರೆ. ಶಾಸಕರ ಘನತೆಗೆ ತಕ್ಕ ನಡವಳಿಕೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಜಾರ ಸಮುದಾಯವನ್ನು ಗುರಿಯಾಗಿಸಿಕೊಂಡು, ಅವರ ಗೌರವಕ್ಕೆ ಚ್ಯುತಿ ತರುವ ಮತ್ತು ಚಾರಿತ್ರ್ಯವಧೆ ಮಾಡುವ ದುರುದ್ದೇಶವನ್ನು ಶಾಸಕರು ಹೊಂದಿದ್ದಾರೆ. ಆಧಾರ ರಹಿತ ಆರೋಪ ಮಾಡುವುದು ಶಾಸಕರಿಗೆ ಶೋಭೆ ತರುವ ವಿಷಯವಲ್ಲ ಎಂದು ಕಿಡಿಕಾರಿದರು.