ಹಾವೇರಿ: ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯ ಅಧಿಕಾರಿಗಳು ಹಾವೇರಿ ತಾಲ್ಲೂಕಿನ ದೇವಗಿರಿ ಅಂಜುಮನ್-ಎ-ಇಸ್ಲಾಂ ಜುಮ್ಮಾ ಮಸೀದಿಗೆ ಭೇಟಿ ನೀಡಿ, ವಕ್ಫ್ ಸಂಸ್ಥೆಯ ಪದಾಧಿಕಾರಿಗಳಿಗೆ ವಕ್ಫ್ ಬಾಡಿಗೆ, ಗುತ್ತಿಗೆ ನಿಯಮಗಳು-2014ರ ಕಡ್ಡಾಯ ಅನುಷ್ಠಾನ ಕುರಿತು ಸೂಚನೆ ನೀಡಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದ ಅವರು, ಯಾವುದೇ ರೀತಿಯ ಅನಧಿಕೃತ ಬಾಡಿಗೆ ನೀಡುವುದನ್ನು ನಿಷೇಧಿಸಲಾಗಿದ್ದು. ಕಡ್ಡಾಯವಾಗಿ ಲೀಸ್ ಅಗ್ರಿಮೆಂಟ್ ಮೂಲಕ ಮಾರುಕಟ್ಟೆ ಆಧಾರದ ಮೇಲೆ ಬಾಡಿಗೆ ದರ ನಿಗದಿ ಮಾಡಿ ಕಾಲಕಾಲಕ್ಕೆ ಬಾಡಿಗೆ ಕರಾರನ್ನು ನವೀಕರಿಸದಿದ್ದರೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳಿಗೂ ಇದು ಅನ್ವಯವಾಗಲಿದ್ದು ಯಾವುದೇ ಸಮಯದಲ್ಲಿ ಸರ್ಕಾರದಿಂದ ಪರಿವೀಕ್ಷಣೆ ಕೈಗೊಳ್ಳಬಹುದು. ಈ ಬಗ್ಗೆ ಅಗತ್ಯ ಕ್ರಮವನ್ನು ಸಂಬಂಧಪಟ್ಟ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿ ಹಾಗೂ ಆಡಳಿತಾಧಿಕಾರಿಗಳು ಆದ್ಯತೆಯ ಮೇರೆಗೆ ಕ್ರಮವಹಿಸಬೇಕು ಎಂದು ಇಲಾಖೆಯ ಹಾವೇರಿ ಜಿಲ್ಲಾ ವಕ್ಫ್ ನಿರೀಕ್ಷಕ ಬಿ.ಮೊಹಮ್ಮದ್ ಸಾದಿಕ್ ತಿಳಿಸಿದರು.
ಜಿಲ್ಲಾ ವಕ್ಫ್ ಅಧಿಕಾರಿ ತಾಜುದ್ದೀನ್ ಶೇಖ್ ಪೆಂಡಾರಿ, ಅಬ್ದುಲ್ ಖಾದರ್ ಮಕಾನದಾರ್ ಹಾಗೂ ವಕ್ಫ್ ಸಂಸ್ಥೆಯ ಅಧ್ಯಕ್ಷರಾದ ಲಾಡ್ಸಾಬ್ ಮತ್ತು ಕಾರ್ಯದರ್ಶಿಯಾದ ಅಸ್ಲಂಸಾಬ್ ಹಾಗೂ ಇತರ ಪದಾಧಿಕಾರಿಗಳು ಇದ್ದರು.