ರಾಣೆಬೆನ್ನೂರು: ಸಮರ್ಪಕ ಬಿತ್ತನೆ ಬೀಜ, ರಸ ಗೊಬ್ಬರ ಪೂರೈಕೆ ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕು ಘಟಕದ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಸಹಾಯಕ ಕೃಷಿ ಅಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ‘ಕಳೆದ ಸಾಲಿನಲ್ಲಿ ಕಳೆದ ವರ್ಷವೂ ಅನಾವೃಷ್ಟಿಯಿಂದ ಬರಗಾಲಕ್ಕೆ ತುತ್ತಾಗಿ ರೈತರು ಕೃಷಿ ಚಟುವಟಿಕೆಯಲ್ಲಿ ಉತ್ಸಾಹವನ್ನು ಕಳೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರೈತರನ್ನು ಉತ್ತೇಜಿಸುವ ಸಲುವಾಗಿ ರೈತರ ಪರ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು’ ಎಂದು ಒತ್ತಾಯಿಸಿದರು.
ಬೀಜ, ಗೊಬ್ಬರ ದಾಸ್ತಾನಿನ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಯನ್ನು ಬಿಡುಗಡೆಗೊಳಿಸಿ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಬಿತ್ತನೆ ಕಾರ್ಯ ನಡೆಯುವಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಅಸಮರ್ಪಕ ಬೀಜ-ಗೊಬ್ಬರ, ಕಳಪೆ ಬೀಜ ಪೂರೈಕೆಯಿಂದ ತಾಲ್ಲೂಕಿನ ರೈತರಿಗೆ ತೀವ್ರ ತರಹದ ಹಾನಿಯಾಗಿದೆ. ಈ ವರ್ಷ ಸಮರ್ಪಕವಾಗಿ ಬೀಜ ಗೊಬ್ಬರ ಪೂರೈಸಬೇಕು ಎಂದು ಆಗ್ರಹಿಸಿದರು.
ಶೀಘ್ರದಲ್ಲಿ ತಾಲ್ಲೂಕು ವಿವಿಧ ರೈತ ಸಂಘದ ಪದಾಧಿಕಾರಿಗಳನ್ನು, ರೈತರನ್ನು ಮತ್ತು ಅಧಿಕೃತ ಬೀಜ-ಗೊಬ್ಬರ ಸರಬರಾಜಿನ ಏಜೆನ್ಸಿಯವರೊಂದಿಗೆ ಸಭೆ ನಡೆಸಬೇಕು ಎಂದು ಮನವಿ ಮಾಡಿದರು.
ಮಹಾದೇವಪ್ಪ ಬಣಕಾರ, ಚಂದ್ರಶೇಖರ ತಿಮ್ಮೇನಹಳ್ಳಿ, ಪ್ರಕಾಶ ಅಂಗಡಿ, ಕುಮಾರ್ ಪೂಜಾರ, ರಾಯರೆಡ್ಡಿ ಕೃಷ್ಣಪ್ಪ, ಚನ್ನಬಸಯ್ಯ ಕೆಂಚಣ್ಣನವರ, ಸುರೇಶ ಪಾಳೇದ, ಬಸವರಾಜ ಕರೆಕಟ್ಟಿ, ಮೈಲಾರಪ್ಪ ಬೂದಿಹಾಳ ಇದ್ದರು.