ಹಾವೇರಿ: ‘ಸಿದ್ದರಾಮಯ್ಯ ಅವರಿಗೆ ಜ್ಯೋತಿಷದಲ್ಲಿ ನಂಬಿಕೆಯಿಲ್ಲ. ಆದರೆ, ಹೆಚ್ಚು ದಿನ ಬಿಜೆಪಿ ಸರ್ಕಾರ ಇರಲ್ಲ ಎಂದು ಹೇಳುವ ಅವರು, ಯಾವಾಗ ಭವಿಷ್ಯ ಹೇಳೋದು ಕಲಿತ್ರು’ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ ತಿರುಗೇಟು ನೀಡಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಿದ್ದರಾಮಯ್ಯ ಅವರು ಕನಸು ಕಾಣುತ್ತಿದ್ದಾರೆ. ನಾವು 118 ಮಂದಿ ಒಗ್ಗಟ್ಟಾಗಿ ಇರುವವರೆಗೆ ಬಿಜೆಪಿ ಸರ್ಕಾರವನ್ನು ಅಲುಗಾಡಿಲು ಯಾರಿಂದಲೂ ಸಾಧ್ಯವಿಲ್ಲ. ಬಸವರಾಜ ಬೊಮ್ಮಾಯಿ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ. 2023ಕ್ಕೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದರು.
ಅಟಲ್ ಬಿಹಾರಿ ವಾಜಪೇಯಿ ಮತ್ತು ಜವಾಹರಲಾಲ್ ನೆಹರು ಅವರು ಪ್ರಧಾನಿಗಳಾಗಿ ಈ ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಪಕ್ಷಾತೀತವಾಗಿ ಅವರನ್ನು ಗೌರವಿಸಬೇಕು ಎಂದರು.
ಹಾವೇರಿಯ ಗಡಿಭಾಗದಲ್ಲಿರುವ ಕುಮಾರಪಟ್ಟಣದ ಬಳಿ ‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ನಿರ್ಮಿಸುವ ಯೋಜನೆಯಿದೆ. ಉತ್ತರ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಚಿತ್ರಗಳು ಸ್ವಾಗತ ಕಮಾನಿನಲ್ಲಿ ಇರಲಿವೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಉದ್ಯಮಿಗಳ ಸಭೆಯಲ್ಲಿಸಿಎಂ ಅವರ ಮಗನಿಗೆ ಏನು ಕೆಲಸ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಬೊಮ್ಮಾಯಿ ಅವರ ಪುತ್ರ ಭರತ್ ಅವರು ಮೂಲತಃ ಉದ್ಯಮಿ. ಹೀಗಾಗಿ ಉದ್ಯಮಿಗಳ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಯಾವ ತಪ್ಪೂ ಇಲ್ಲ ಎಂದು ಸಮರ್ಥಿಸಿಕೊಂಡರು.