ಹಾನಗಲ್: ತಾಲ್ಲೂಕಿನ ಹಿರೂರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಹಾನಗಲ್ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮತ್ತು ಸಂಸದ ಶಿವಕುಮಾರ ಉದಾಸಿ ಮಂಗಳವಾರ ಜಂಟಿಯಾಗಿ ಚುನಾವಣಾ ಪ್ರಚಾರ ಕೈಗೊಂಡರು.
ಗುರುರಾಯಪಟ್ಟಣ, ಸೇವಾಲಾಲ, ಮಾವಕೊಪ್ಪ, ಅಜಗುಂಡಿಕೊಪ್ಪ, ಜಂಗಿನಕೊಪ್ಪ, ಚಿಕ್ಕಾಂಶಿ, ಕ್ಯಾಸನೂರ, ಹುಲಗಿನಕೊಪ್ಪ, ಕೋಣನಕೊಪ್ಪ, ಹಿರೇಕಾಂಶಿ, ಮಕರವಳ್ಳಿ, ಶೇಷಗಿರಿ, ಇನಾಂಲಕ್ಮಾಪೂರ, ಅರಿಶಿಣಗುಪ್ಪಿ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡರು.
ಜಂಗಿನಕೊಪ್ಪ ಗ್ರಾಮದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಶಿವರಾಜ ಸಜ್ಜನರ, ‘ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾನಗಲ್ ಉಪಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಬೇಕು’ ಎಂದು ಹೇಳಿದರು.
ಸಂಸದ ಶಿವಕುಮಾರ ಉದಾಸಿ, ‘ಲಂಬಾಣಿ ಜನಾಂಗದ ತಾಂಡಾಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಆದರ್ಶಗ್ರಾಮ ಯೋಜನೆಯಲ್ಲಿ ಹಲವಾರು ತಾಂಡಾಗಳನ್ನು ಸೇರಿಸಿಕೊಳ್ಳಲಾಗಿದೆ. ಇದೇ ಮಾದರಿಯ ಪ್ರಗತಿಗಾಗಿ ಬಿಜೆಪಿ ಬೆಂಬಲಿಸಿ’ ಎಂದು ಮನವಿ ಮಾಡಿದರು.