ರಾಣೆಬೆನ್ನೂರು: ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆದಿರುವುದನ್ನು ಖಂಡಿಸಿ ಖಂಡಿಸಿ ರಾಣೆಬೆನ್ನೂರಿನ ಬಸ್ ನಿಲ್ದಾಣದ ಎದುರುಗಡೆ ಸೋಮವಾರ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿ.ಕೆ.ಶಿವಕುಮಾರ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ರಸ್ತೆ ತಡೆದು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಅಭಿಮಾನಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಕೆಂದ್ರದ ಮೋದಿ ಸರ್ಕಾರ ಶಿವಕುಮಾರ ಅವರ ಬೆಳವಣಿಗೆ ಸಹಿಸಲಾಗದೆ ಸಿಬಿಐ ಮೂಲಕ ಅವರನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ. ಆದರೆ ಇಂತಹ ಯಾವುದೇ ದಾಳಿಗೆ ಅವರು ಜಗ್ಗುವುದಿಲ್ಲ ಎಂದರು.
ಸದ್ಯ ರಾಜ್ಯದ ಎರಡು ಕಡೆ ಉಪಚುನಾವಣೆ ನಡೆಯುತ್ತಿದ್ದು, ಡಿಕೆಶಿ ಪ್ರಚಾರ, ಅವರ ಕಾರ್ಯತಂತ್ರ ನೋಡಿ ಬಿಜೆಪಿ ಇಂತಹ ಕೆಲಸಕ್ಕೆ ಕೈ ಹಾಕಿದೆ. ಆದರೆ ಬಿಜೆಪಿ ನೇರ ಹೋರಾಟ ಮಾಡದೆ ಇಂತಹ ಹೀನ ಕೆಲಸಕ್ಕೆ ಕೈ ಹಾಕಿರುವುದು ದುರದೃಷ್ಟಕರ ಎಂದು ಟೀಕಿಸಿದರು.
ರವೀಂದ್ರಗೌಡ ಪಾಟೀಲ, ಇರ್ಫಾನ್ ದಿಡಗೂರ, ಶೇರ್ ಖಾನ್ ಖಾಬೂಲಿ, ಆನಂದ ಹುಲಬನ್ನಿ, ಶಶಿಧರ ಬಸೆನಾಯಕ, ಗಿರೀಶ ಮಾಗನೂರು ಇದ್ದರು.