ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕರ ನೆತ್ತಿ ಮೇಲೆ ತೂಗುತ್ತಿದೆ ‘ಹೈ ಟೆನ್ಶನ್’

ವಿದ್ಯುತ್ ತಂತಿಯಿಂದ ಸಾವು–ನೋವು * ದುರಂತ ಹೆಚ್ಚಿದರೂ ಎಚ್ಚೆತ್ತುಕೊಳ್ಳದ ಹೆಸ್ಕಾಂ
Last Updated 9 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಮನೆಗಳ ಅಕ್ಕ–ಪಕ್ಕದಲ್ಲೇ ಹಾದು ಹೋಗಿರುವ ವಿದ್ಯುತ್ ತಂತಿಗಳಿಂದ ನಗರದ ಜನ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.ಸಾಮರ್ಥ್ಯ ಕಳೆದುಕೊಂಡಿರುವ ತಂತಿಗಳು, ಮಳೆ–ಗಾಳಿಗೆ ತುಂಡಾಗಿ ರಸ್ತೆಗೆ ಬೀಳುವ ಮೂಲಕ ಅಪಾಯಕ್ಕೆ ಆಹ್ವಾನಿಸುತ್ತಿವೆ.ವಿದ್ಯುತ್‌ಗೆ ಸಂಬಂಧಿಸಿದಂತೆ ಜನ ಎದುರಿಸುತ್ತಿರುವ ಸಮಸ್ಯೆಗಳು ಯಾವುವು? ಹೆಸ್ಕಾಂ ನಿಯಮ ಏನು ಹೇಳುತ್ತದೆ? ಅಧಿಕಾರಿಗಳು ಯಾವ ರೀತಿಯ ಪರಿಹಾರ ಒದಗಿಸುತ್ತಿದ್ದಾರೆ ಎಂಬ ಅಂಶಗಳ ಮೇಲೆ ಈ ವಾರದ ‘ನಮ್ಮ ನಗರ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ.

ಹಾವೇರಿ: ಮನೆ ಹಾಗೂ ಇತರೆ ವಾಣಿಜ್ಯ ಕಟ್ಟಡಗಳ ಪಕ್ಕದಲ್ಲೇ ಹಾದು ಹೋಗಿರುವ ಹೈಟೆನ್ಶನ್‌ ತಂತಿಗಳು. ಕಂಬದಲ್ಲಿ ನೇತಾಡುತ್ತಿರುವ ಸರ್ವಿಸ್ ವೈರ್‌ಗಳು. ಮನೆಗಳ ಗೋಡೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬಗಳು. ನಿರ್ವಹಣೆ ಇಲ್ಲದೆ ಅಪಾಯಕ್ಕೆ ಆಹ್ವಾನಿಸುತ್ತಿರುವ ಟ್ರಾನ್ಸ್‌ಫಾರ್ಮರ್‌ಗಳು...

ಹಾವೇರಿ ನಗರದಲ್ಲಿ ಒಂದು ಸುತ್ತು ಹಾಕಿದರೆ ಬಹುತೇಕ ಬಡಾವಣೆಗಳಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯಗಳಿವು. ಕೆಲವು ಕಡೆ ಮಕ್ಕಳ ಕೈಗೇ ತಾಕುವಂತೆ ತಂತಿಗಳಿದ್ದರೆ, ಇನ್ನೂ ಕೆಲವೆಡೆ ಮರಗಳ ನಡುವೆಯೇ ವೈರ್‌ಗಳು ನುಸುಳಿವೆ. ಮಳೆ ಬಂದಾಗ ವಿದ್ಯುತ್ ಕಂಬದ ಸುತ್ತಲೂ ‘ಗ್ರೌಂಡಿಂಗ್’ ಆಗುವ ದೂರುಗಳೂ ಸಾಮಾನ್ಯವಾಗಿವೆ.

ಕೋಡಿಯಾಲದ ಒಂದೇ ಬಡಾವಣೆಯಲ್ಲಿ ಇತ್ತೀಚೆಗೆ ಹೈಟೆನ್ಶನ್ ವೈರ್‌ನಿಂದ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ಮೂರು ಮಂದಿ ಮೃತಪಟ್ಟಿದ್ದರು. ಜೇಕಿನಗಟ್ಟಿಯಲ್ಲಿ ತುಂಡಾಗಿ ಬಿದ್ದಿದ್ದ ತಂತಿ ತುಳಿದು 8 ವರ್ಷದ ದಿಗಂತ್ ಎಂಬ ಬಾಲಕ ಜೀವ ತೆತ್ತಿದ್ದ. ಅಂಕಸಾಪುರದಲ್ಲಿ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡಿತ್ತು. ಇಂತಹ ಸಾಲು ಸಾಲು ಅವಘಡಗಳ ನಡುವೆ, ಸುರಕ್ಷತೆ ಇಲ್ಲದೆ ದುರಸ್ತಿಗೆ ಮುಂದಾಗಿ ಲೈನ್‌ಮ್ಯಾನ್‌ಗಳೂ ಪ್ರಾಣ ಬಿಟ್ಟ ಘಟನೆಗಳೂ ನಗರದಲ್ಲಿ ಸಂಭವಿಸುತ್ತಲೇ ಇವೆ.

ಹಾವೇರಿ ನಗರವು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಗೆ ಬರುತ್ತದೆ. ಇಲ್ಲಿಯ ಬಡಾವಣೆಗಳಲ್ಲಿ 11 ಕೆವಿ ಲೈನ್‌ ಹಾದುಹೊಗಿದೆ.ಬಸವೇಶ್ವರ ನಗರ, ಅಶ್ವಿನಿನಗರ, ಶಿವಾಜಿನಗರ, ಶಿವಯೋಗಿಶ್ವರನಗರ, ವಿದ್ಯಾನಗರ, ಶಿವಲಿಂಗನಗರ ಬಡಾವಣೆ, ಲಾಲ್‌ಬಹದ್ದೂರ ಶಾಸ್ತ್ರಿ ಮಾರುಕಟ್ಟೆಯಲ್ಲಿ ಹೈಟೆನ್ಶನ್‌ ವೈರ್‌ಗಳು ನೆಲದಿಂದ ಕಡಿಮೆ ಅಂತರದ ಎತ್ತರದಲ್ಲೇ ಇವೆ.

ನಿಯಮ ಏನು ಹೇಳುತ್ತದೆ?:‘ಹೈಟೆನ್ಶನ್ ವೈರ್ ಹಾಗೂ ಮನೆಯ ನಡುವೆ 3 ರಿಂದ 5 ಮೀಟರ್‌ ಅಂತರ ಇರಬೇಕು. ಹೊಸದಾಗಿ ಮನೆ ಕಟ್ಟಿಸುವವರು ನಗರಸಭೆ ಹಾಗೂ ಹೆಸ್ಕಾಂನಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂಬ ನಿಯಮಗಳಿವೆ. ಇವುಗಳನ್ನು ಉಲ್ಲಂಘಿಸಿದವರಿಗೆ ಕೆಪಿಟಿಸಿಎಲ್‌ನಿಂದ ನೋಟಿಸ್ ನೀಡಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದು ಹೆಸ್ಕಾಂನ ವಿ.ಎ.ಮರಿಗೌಡ ತಿಳಿಸಿದರು.

‘ಬಟ್ಟೆ ಒಣಗಿಸಲು ವಿದ್ಯುತ್ ಕಂಬಕ್ಕೆ ತಂತಿಯನ್ನು ಕಟ್ಟಬಾರದು. ಕಂಬಕ್ಕೆ ಹಾಗೂ ಅದರ ಅಕ್ಕಪಕ್ಕದಲ್ಲಿ ದನ–ಕರುಗಳನ್ನು ಕಟ್ಟಬಾರದು. ಕಂಬ ಹತ್ತುವುದು, ಮುಟ್ಟುವುದು ಅಪರಾಧ ಎಂಬ ಸಾಮಾನ್ಯ ನಿಯಮಗಳೂ ಇವೆ. ಆದರೆ, ಹಾವೇರಿ ನಗರ ವ್ಯಾಪ್ತಿಯ ಬಡಾವಣೆಗಳಲ್ಲಿ, ಹೊರವಲಯದ ಗ್ರಾಮಗಳಲ್ಲಿ ಈ ನಿಯಮಗಳು ಪಾಲನೆಯಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತರಕಾರಿ ಮಾರುಕಟ್ಟೆ ಹಾಗೂ ಇನ್ನಿತರೆ ಸಂತೆ ಪ್ರದೇಶಗಳಲ್ಲಿ ರೈತರು ಟ್ರಾನ್ಸ್‌ಫಾರ್ಮರ್‌ಗಳ ಪಕ್ಕದಲ್ಲೇ ಕುಳಿತು ವ್ಯಾಪಾರ ಮಾಡುತ್ತಿರುತ್ತಾರೆ. ಅಲ್ಲಿ ಆ ವ್ಯಾಪಾರಿಯ ಜತೆಗೆ, ಖರೀದಿಗೆ ಬರುವ ಗ್ರಾಹಕರ ಜೀವಕ್ಕೂ ಅಪಾಯವಿರುತ್ತದೆ. ಈ ಕುರಿತು ಎಷ್ಟೇ ಎಚ್ಚರಿಕೆ ನೀಡಿದರೂ ವ್ಯಾಪಾರಿಗಳು ಮಾತು ಕೇಳುವುದಿಲ್ಲ. ಇತ್ತೀಚೆಗೆ ಟ್ರಾನ್ಸ್‌ಫಾರ್ಮರ್‌ ಬಳಿ ವಿದ್ಯುತ್‌ ಪ್ರವಹಿಸಿ ನಾಯಿ, ಕೋಳಿ, ಹಂದಿಗಳು ಸಾವನ್ನಪ್ಪಿದ್ದವು. ಆ ಕಾರಣದಿಂದ ವ್ಯಾಪಾರಿಗಳನ್ನು ಒತ್ತಾಯ ಪೂರ್ವಕವಾಗಿ ಸರಿಸಿ, ಟ್ರಾನ್ಸ್‌ಫಾರ್ಮರ್ ಸುತ್ತ ತಂತಿಯ ಜಾಲರಿ ಹಾಕಿದ್ದೆವು’ ಎನ್ನುತ್ತಾರೆ ಅಧಿಕಾರಿಗಳು.

‘ಕಟ್ಟಡ ನಿರ್ಮಾಣದ ವೇಳೆ ಕಾರ್ಮಿಕರು ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆಗಳು ಸಾಕಷ್ಟಿವೆ. ಅವೆಲ್ಲ ‘ಸಂಧಾನ’ದ ಮೂಲಕವೇ ಬಗೆಹರಿದುಬಿಡುತ್ತವೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಹೆಸ್ಕಾಂನಲ್ಲಿ ವಿಶೇಷ ತಂಡವನ್ನು ರಚಿಸಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಹಾಗೆಯೇ ಉಳಿದಿದೆ. ನಗರದ ಕೆಲವು ಬಡಾವಣೆಗಳಲ್ಲಿ ಲೈನ್‌ಗಳು ಸಡಿಲಗೊಂಡಿದ್ದು,ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳು ತ್ವರಿತವಾಗಿ ಕ್ರಮ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಶಿವಾಜಿನಗರದ ನಿವಾಸಿ ನಾಗರಾಜ್.

‘ತುರ್ತು ನಿರ್ವಹಣಾ ಕಾಮಗಾರಿ ಇದೆ. ಬೆಳಿಗ್ಗೆಯಿಂದ ಸಂಜೆಯ ತನಕ ವಿದ್ಯುತ್‌ ಸ್ಥಗಿತಗೊಳಿಸಲಾಗುವುದು’ ಎಂದುಹೆಸ್ಕಾಂನವರು ಪದೇ ಪದೇ ಪ್ರಕಟಣೆ ತಿಳಿಸುತ್ತಾರೆ. ಆದರೆ, ಅವರು ಎಲ್ಲಿ ಕಾಮಗಾರಿ ಮಾಡುತ್ತಿದ್ದಾರೆ ಎಂಬುದು ಮಾತ್ರ ಯಾರಿಗೂ ಗೊತ್ತಾಗುವುದಿಲ್ಲ. ಯಥಾ ಪ್ರಕಾರ ಸಮಸ್ಯೆಗಳು ಮುಂದುವರಿಯುತ್ತವೆ ಎಂದುಹೆಸರು ಹೇಳಲು ಇಚ್ಚಿಸದ ಅಶ್ವಿನಿ ನಗರದ ನಿವಾಸಿಯೊಬ್ಬರು ದೂರಿದರು.

‘ವಿದ್ಯುತ್ ಕಂಬಕ್ಕೆ ಹಾಗೂ ವೈರ್‌ಗಳಿಗೆ ಗಿಡ–ಬಳ್ಳಿಗಳು ಹಬ್ಬಿದ್ದರೂ ಅದನ್ನು ಸ್ವಚ್ಛಗೊಳಿಸುವ ಕೆಲಸವಾಗಿಲ್ಲ. ಎಷ್ಟೋ ಕಡೆ ಬೀದಿ ದೀಪಗಳು ಉರಿಯುತ್ತಲೇ ಇಲ್ಲ. ಇನ್ನೂ ಕೆಲವು ಬಡಾವಣೆಗಳಲ್ಲಿ ಹಗಲಲ್ಲೂ ಉರಿಯುತ್ತಿರುತ್ತವೆ. ಸಾರ್ವಜನಿಕರ ಸುರಕ್ಷತೆ ಜತೆಗೆ ವಿದ್ಯುತ್ ಉಳಿತಾಯದ ಬಗ್ಗೆಯೂ ಹೆಸ್ಕಾಂನವರು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು’ ಎಂದುಇಜಾರಿಲಕಮಾಪುರದ ನಿವಾಸಿ ಎಸ್‌.ಶರಣ್ ಒತ್ತಾಯಿಸಿದರು.

ಪ್ರತಿಕ್ರಿಯೆ ಕಳುಹಿಸಲು: 97390 15632

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT