ಹಾವೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಿ, ಸಮಾನ ವೇತನ ಮತ್ತು ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ವತಿಯಿಂದ ವಾ.ಕ.ರ.ಸಾ. ಸಂಸ್ಥೆ ಹಾವೇರಿಯ ವಿಭಾಗೀಯ ಕಚೇರಿ ಎದುರು ಮಂಗಳವಾರ ಸಾಂಕೇತಿಕ ಧರಣಿ ನಡೆಯಿತು.
ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಜಿ.ಪ್ರಕಾಶಮೂರ್ತಿ ಮಾತನಾಡಿ, ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದೇವೆ. ಸಾರಿಗೆ ನೌಕರರು ದಿನದ 24 ಗಂಟೆ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಅನೇಕ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ವೇತನದಲ್ಲೂ ತಾರತಮ್ಯವಾಗುತ್ತಿದೆ. ಹಾಗಾಗಿ ಸಂಸ್ಥೆಯ ನೌಕರರನ್ನು ಸಾರಿಗೆ ನೌಕರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸಂಸ್ಥೆಯ ಲಾಭ–ನಷ್ಟದ ಕಾರಣಗಳನ್ನು ನೀಡದೇ ನೌಕರರಿಗೆ ನೀಡಬೇಕಾದ ಎಲ್ಲ ಆರ್ಥಿಕ ಮತ್ತು ಇತರ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಬೇಕು ಎಂದು ವಿಭಾಗೀಯ ಸಾರಿಗೆ ಅಧಿಕಾರಿ ಎಸ್.ಎನ್.ಮಜುಂದಾರ ಅವರಿಗೆ ಮನವಿ ಸಲ್ಲಿಸಿದರು.
ಧರಣಿಯಲ್ಲಿ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪವಾರ, ವಿ.ಬಿ. ಕುಲಕರ್ಣಿ, ಜಿ.ಆರ್. ಹಾವನೂರು, ಮಂಜುನಾಥ ಅಂಗಡಿ, ಗಿರೀಶ ಬಣಕಾರ, ಎಸ್.ಎಸ್.ಸೋಮನಾಳ, ಆರ್.ಎಚ್. ಕುಂಕುಮಗಾರ, ಕರಿಯಪ್ಪ ಸುಂಡಿ, ಜಿ.ಪಿ. ಚವ್ಹಾಣ, ರಮೇಶ ಹಿರೇತನದ, ಮಂಗಳಮ್ಮ ಇದ್ದರು.