ರಾಣೆಬೆನ್ನೂರು: ರೈತರು ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದಲ್ಲಿ ಬೆಳೆಗಳಿಗೆ ಪೋಷಕಾಂಶ ನೀಡಬೇಕು ಎಂದು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಪಿ. ಅಶೋಕ ಹೇಳಿದರು.
ತಾಲ್ಲೂಕಿನ ಹನುಮಾಪುರದಲ್ಲಿ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಜನ ನಿರ್ಮಲ ಯೋಜನೆಯಡಿ ಶುಕ್ರವಾರ ರೈತರಿಗೆ ಸಮಗ್ರ ಕೃಷಿ ಮತ್ತು ಸಮಗ್ರ ಕೀಟ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳೆಗಳಿಗೆ ಸಾವಯವ ಗೊಬ್ಬರ ಕೊಡಲು ರೈತರು ತಮ್ಮ ಹೊಲದಲ್ಲಿಯೇ ಎರೆಹುಳು ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ತಯಾರಿಸಬಹುದು. ಇದರಿಂದ ಖರ್ಚು ಕಡಿಮೆಯಾಗುತ್ತದೆ ಹಾಗೂ ಉತ್ತಮ ಗೊಬ್ಬರವೂ ಲಭ್ಯವಾಗುತ್ತದೆ ಎಂದರು. ಗೋವಿನ ಜೋಳದಲ್ಲಿ ಕಳೆ ನಿರ್ವಹಣೆ ಕುರಿತು ಮಾತನಾಡಿ, ಸಮಗ್ರ ಕಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಡಾ. ಕೆ.ಪಿ. ಗುಂಡಣ್ಣನವರ ಮಾತನಾಡಿ, ಕೀಟಗಳಿಂದ ಬೆಳೆ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಹನುಮಾಪರ ಗ್ರಾಮದಲ್ಲಿ ಜಲ ನೆಲ ಯೋಜನೆ ಅಡಿಯಲ್ಲಿ ಜಲಾನಯನ ಅಭಿವೃದ್ಧಿಯಾಗಿದೆ. ಹೆಮಾಟಾ ಹುಲ್ಲಿನ ಬೀಜಗಳನ್ನು ಬದುವಿನಮೇಲೆ ಬೆಳೆದು ಮಣ್ಣು– ನೀರು ಸಂರಕ್ಷಣೆ ಮಾಡಬಹುದು. ಜೊತೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಬಹುದು. ಆಯ್ದ ರೈತರನ್ನು ಗುರುತಿಸಿ ಅವರ ಜಮೀನುಗಳಲ್ಲಿ ಜೀವಾಮೃತ, ಕೈತೋಟ, ಎರಹುಳು ತೊಟ್ಟಿ ಪ್ರಾತ್ಯಕ್ಷಿಕೆ ನೀಡಲಾಗಿದೆ ಎಂದರು.