ಶಿಗ್ಗಾವಿ: ಬೆಳೆ ವಿಮೆ ತುಂಬುವ ಸಲುವಾಗಿ ಎಫ್.ಐ.ಡಿ ನಂಬರ್ ಜೋಡಿಸಲು ರೈತರು ತಾಲ್ಲೂಕಿನ ಬಂಕಾಪುರ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ಮಂಗಳವಾರ ಮಳೆಯನ್ನೂ ಲೆಕ್ಕಿಸದೆ ಸರತಿಯಲ್ಲಿ ನಿಂತಿದ್ದರು.
ರೈತರ ಎಫ್.ಐ.ಡಿ ನಂಬರ್ ತಾಂತ್ರಿಕ ದೋಷ ಸರಿಪಡಿಸಿ, ನಿಗದಿ ಅವಧಿಯಲ್ಲಿ ಬೆಳೆ ವಿಮೆ ತುಂಬಲು ಅವಕಾಶ ಕಲ್ಪಿಸಬೇಕು ಎಂದು ರೈತ ಮುಖಂಡರು ತಹಶೀಲ್ದಾರ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಈ ವರೆಗೆ ಪ್ರಯೋಜನವಾಗಿಲ್ಲ.
ಸರ್ವರ್ ಸಮಸ್ಯೆಯಿಂದ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಎರಡ್ಮೂರು ದಿನಗಳ ವರೆಗೆ ಸರತಿಯಲ್ಲಿ ನಿಲ್ಲುವಂತಾಗಿದೆ. ಈ ನಂಬರ್ ಇಲ್ಲದೆ ಬೆಳೆ ವಿಮೆ ತುಂಬಲು ಸಾಧ್ಯವಿಲ್ಲ. ತಪ್ಪಾಗಿ ನಮೂದು ಮಾಡಿರುವ ನಂಬರನ್ನು ತಿದ್ದುಪಡಿ ಮಾಡಿ, ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಜುಲೈ 31 ಬೆಳೆ ವಿಮೆ ತುಂಬಲು ಕೊನೆ ದಿನವಾಗಿದೆ. ಆದರೆ ತಪ್ಪಾಗಿರುವ ನಂಬರ್ ಸರಿಪಡಿಸಲು ಕನಿಷ್ಟ ಮೂರು ದಿನ ಬೇಕು ಎಂದು ಹೇಳುತ್ತಿದ್ದಾರೆ. ಹಾಗಾಗಿ ಬೆಳೆ ವಿಮೆ ತುಂಬುವ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ರೈತ ಸಂಘದ ಬಂಕಾಪುರ ಘಟಕದ ಅಧ್ಯಕ್ಷ ದೇವೇಂದ್ರಪ್ಪ ಹಳವಳ್ಳಿ, ಬಸವರಾಜ ಮಲ್ಲೂರ, ಮಂಜುನಾಥ ಸವೂರ, ಸುರೇಶ ಸಡಗರವಳ್ಳಿ, ಚಿಕ್ಕನಗೌಡ್ರ ಪಾಟೀಲ, ಮಾಲತೇಶ ಕುರಿ, ಮಾಲತೇಶ ಸಕ್ರಿ, ಅಶೋಕ ಹಳವಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.