ಹಾವೇರಿ: ಇಲ್ಲಿನ ನಾಗೇಂದ್ರನ ಮಟ್ಟಿಯಲ್ಲಿರುವ ಕಣಿಯ ಬಳಿ ಕಣದಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 17 ಟ್ರ್ಯಾಕ್ಟರ್ ಮೆಕ್ಕೆಜೋಳದ ತೆನೆಯ ಬಣವಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂದಾಜು ₹7 ಲಕ್ಷ ಮೌಲ್ಯದ ಮೆಕ್ಕೆಜೋಳ ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ ನಡೆದಿದೆ.
ನಾಗೇಂದ್ರ ಮಟ್ಟಿಯಲ್ಲಿ ಭಾನುವಾರ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಜನತೆ ಭಾಗವಹಿಸಿದ್ದ ವೇಳೆ ಯಾರೋ ದುಷ್ಕರ್ಮಿಗಳು ಮೆಕ್ಕೆಜೋಳದ ಬಣವಿಗೆ ಬೆಂಕಿ ಹಚ್ಚಿದ ಕಾರಣ ಶಿವಬಸಪ್ಪ ಮುದ್ದಿ ಎನ್ನುವವರಿಗೆ ಸೇರಿದ್ದ ಮೆಕ್ಕೆಜೋಳದ ಬಣವಿ ಸುಟ್ಟು ಹೋಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಶ್ರಮಿಸಿದರು. ಆದರೆ ಅದಾಗಲೇ ಬೆಂಕಿಯ ಕೆನ್ನಾಲಿಗೆ ಮೆಕ್ಕೆಜೋಳದ ಬಣವಿಯನ್ನು ಆವರಿಸಿಕೊಂಡು ಮೆಕ್ಕೆಜೋಳದ ತೆನೆಗಳು ಸುಟ್ಟು ಹೋಗಿದ್ದವು. ಸ್ಥಳೀಯರು ಸಹ ಬೆಂಕಿ ನಂದಿಸಲು ಶ್ರಮಿಸಿದರು ಬೆಂಕಿ ಹತೋಟಿಗೆ ಬಾರದೆ ಮೆಕ್ಕೆಜೋಳದ ಬಣವಿ ಸುಟ್ಟಿದೆ.
17 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸುಟ್ಟಿದ್ದು, ಆಕಸ್ಮಿಕವಾಗಿ ಬೆಂಕಿ ತಗಲಿ ಅಂದಾಜು ₹7 ಲಕ್ಷ ಮೌಲ್ಯದ ಮೆಕ್ಕೆಜೋಳ ಹಾಳಾಗಿದ್ದು, ಜಿಲ್ಲಾಡಳಿತ ಸೂಕ್ತ ಪರಿಹಾರವನ್ನು ನೀಡಬೇಕೆಂದು ನಗರಸಭೆಯ ಮಾಜಿ ಸದಸ್ಯ ಮಲ್ಲೇಶಪ್ಪ ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ.