ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂತುಹುಳು ನಿವಾರಣೆಗೆ ಉಚಿತ ಮಾತ್ರೆ

ಆ.10ರಿಂದ 19 ವರ್ಷದೊಳಗಿನ ಮಕ್ಕಳಿಗೆ ಮಾತ್ರೆ ವಿತರಣೆ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
Last Updated 29 ಜುಲೈ 2022, 13:24 IST
ಅಕ್ಷರ ಗಾತ್ರ

ಹಾವೇರಿ: ಜಂತುಹುಳು ನಿವಾರಣೆಗಾಗಿ ಆ.10ರಿಂದ ಜಿಲ್ಲೆಯಾದ್ಯಂತ1ರಿಂದ19 ವರ್ಷದ ಮಕ್ಕಳಿಗೆ ಉಚಿತವಾಗಿ ಅಲ್ಬೆಂಡಝೊಲ್ ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂತರ ಇಲಾಖಾ ಸಮನ್ವಯದಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಂತುಹುಳು ನಿವಾರಣಾ ದಿನ ಹಾಗೂ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪ್ರಾಕ್ಷಿಕ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತಂತೆ ಪರಿಶೀಲನೆ ನಡೆಸಿ ಪ್ರಚಾರ ಸಾಮಗ್ರಿ ಬಿಡುಗೊಳಿಸಿ ಮಾತನಾಡಿದರು.

ಮಕ್ಕಳಿಗೆ ಅತಿಸಾರ ಮತ್ತು ಜಂತುಹುಳು ಹರಡುವ ಕುರಿತಂತೆ ಜಾಗೃತಿಮೂಡಿಸಿ. ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಕೈ ತೊಳೆಯುವ ಕುರಿತಂತೆ ಅಭ್ಯಾಸ ಮಾಡಿಸಿ. ಕುಡಿಯುವ ನೀರಿನ ಸ್ವಚ್ಛತೆ, ಮಕ್ಕಳಲ್ಲಿ ವೈಯಕ್ತಿಕ ಕಾಳಜಿ ಕುರಿತಂತೆ ಜಾಗೃತಿ ಮೂಡಿಸಿ ಎಂದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ ಅವರು ಸಭೆಗೆ ಮಾಹಿತಿ ನೀಡಿ, ಮಣ್ಣಿನ ಮೂಲಕ ಹರಡುವ ಜಂತು ಹುಳು ಸೋಂಕು, ಪರಿಣಾಮಗಳು ಹಾಗೂ ಇದರಿಂದ ಆರೋಗ್ಯ, ಮಕ್ಕಳ ಶಿಕ್ಷಣ, ಜೀವನೋಪಾಯದ ಮೇಲೆ ಉಂಟಾಗುವ ಪರಿಣಾಮ ಕುರಿತಂತೆ ವಿವರಿಸಿದರು.

5.96 ಲಕ್ಷ ಮಕ್ಕಳಿಗೆ ವಿತರಣೆಯ ಗುರಿ

ಜಂತು ಹುಳುನಿವಾರಣೆಗಾಗಿ ಜಿಲ್ಲೆಯಲ್ಲಿ ಆಗಸ್ಟ್ 10 ರಂದು ಜಂತುಹುಳು ಮಾತ್ರೆಯನ್ನು ಅಂಗನವಾಡಿ, ಶಾಲಾ-ಕಾಲೇಜು ಮಕ್ಕಳಿಗೆ ವಿತರಿಸಲಾಗುವುದು. ಆಗಸ್ಟ್ 17ರಂದು ‘ಮಾಪ್ ಆಪ್’ ದಿನವನ್ನು ಹಮ್ಮಿಕೊಳ್ಳಲಾಗಿದೆ. ಒಂದರಿಂದ ಐದು ವರ್ಷದ 1,46,907 ಮಕ್ಕಳು ಹಾಗೂ 6ರಿಂದ 19 ವರ್ಷದ 4,49,997 ಮಕ್ಕಳು ಒಳಗೊಂಡಂತೆ ಒಂದರಿಂದ 19 ವರ್ಷದ 5,96,904 ಮಕ್ಕಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಜಂತು ಹುಳು ನಿವಾರಣೆ ಕಾರ್ಯಕ್ರಮಕ್ಕೆ ವಿವಿಧ ಇಲಾಖಾ ಅಧಿಕಾರಿಗಳ ಜವಾಬ್ದಾರಿ ಹಾಗೂ ಸಹಕಾರ ಕುರಿತಂತೆ ಮಾಹಿತಿ ನೀಡಿದರು. ಸಿಬ್ಬಂದಿಗೆ ತರಬೇತಿ, ಕಾರ್ಯಕ್ರಮದ ಕಾರ್ಯಸೂಚಿ ಕುರಿತಂತೆ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕ ಕುಂದೂರ, ಡಿಡಿಪಿಐ ಜಗದೀಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಡಾ.ನಿಲೇಶ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ವಿವಿಧ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT