ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಎಂಜಿನಿಯರ್ ಚಂದ್ರಪ್ಪ ಓಲೇಕಾರ್ ಅವರ ಎರಡು ಮನೆಗಳ ಮೇಲೆ ಶುಕ್ರವಾರ ಬೆಳಿಗ್ಗೆ ಭ್ರಷ್ಟಾಚಾರ ನಿಗ್ರಹದ ದಳ (ಎಸಿಬಿ) ದಾಳಿ ನಡೆಸಿದೆ.
ಚಂದ್ರಪ್ಪ ಓಲೇಕಾರ್
ರಾಣೆಬೆನ್ನೂರಿನ ಸಿದ್ಧಾರೂಢ ನಗರ ಮತ್ತು ಬ್ಯಾಡಗಿ ತಾಲ್ಲೂಕಿನ ಆಣೂರು ಗ್ರಾಮದಲ್ಲಿರುವ ಸ್ವಂತ ಮನೆಗಳ ಮೇಲೆ ಏಕಕಾಲಕ್ಕೆ ಎಸಿಬಿಯ ಎರಡು ತಂಡಗಳು ದಾಳಿ ನಡೆಸಿವೆ. ಮನೆಗಳಲ್ಲಿ ₹13.39 ಲಕ್ಷ ನಗದು, 400 ಗ್ರಾಂ ಬಂಗಾರದ ಆಭರಣ, 1600 ಗ್ರಾಂ ಬೆಳ್ಳಿ ಸಾಮಾನು ದೊರೆತಿವೆ.
ಬ್ಯಾಡಗಿ ಮತ್ತು ರಾಣೆಬೆನ್ನೂರಿನಲ್ಲಿ ತಂದೆ ಮತ್ತು ಪತ್ನಿ ಹೆಸರಿನಲ್ಲಿ ಒಟ್ಟು 5 ಖಾಲಿ ನಿವೇಶನಗಳು ಮತ್ತು ಸಿದ್ಧಾರೂಢ ನಗರದಲ್ಲಿ ₹80 ಲಕ್ಷ ಬೆಲೆಬಾಳುವ ಸ್ವಂತ ಮನೆ ಸೇರಿದಂತೆ ಎರಡು ಮನೆ ಹಾಗೂ ರಾಣೆಬೆನ್ನೂರಿನ ಗುಡಗೂರು ಬಳಿ 25 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. ಆನೂರು ಬಳಿ ಪಿತ್ರಾರ್ಜಿತ ಜಮೀನು ಮತ್ತು 1 ಕೋಳಿ ಫಾರಂ ಇರುವುದು ಬೆಳಕಿಗೆ ಬಂದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಡಿವೈಎಸ್ಪಿ ಗೋಪಿ ಬಿ.ಆರ್. ನೇತೃತ್ವದಲ್ಲಿ ದಾಳಿ ನಡೆದಿದೆ. ಪರಿಶೀಲನೆ ಕಾರ್ಯ ಇನ್ನೂ ಮುಂದುವರಿದಿದೆ.