ಹಾವೇರಿ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಆಗ್ರಹಿಸಿ ಕೆಲ ಸಮಾಜದ ಹಿತ ಶತ್ರುಗಳು ಸಲ್ಲಿಸುವ ಅರ್ಜಿಯ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ (ವಡ್ಡರ) ಸಂಘದ ಜಿಲ್ಲಾ ಘಟಕದ ವತಿಯಿಂದ ಪತ್ರ ಚಳವಳಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯಾದಾದ್ಯಂತ ಇರುವ ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್ಗೆ ಕೆಲವರು ಅರ್ಜಿ ಸಲ್ಲಿಸಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಪ್ರಾಧಿಕಾರದ ಮುಂದೆ ಅವರಿಗೆ ಹಾಜರಾಗಲು ಸೂಚನೆ ನೀಡಿ ಮಾನ್ಯ ಸುಪ್ರೀ ಕೋರ್ಟ್ ಅರ್ಜಿಯನ್ನು ಫೆ.14ರಂದು ವಿಲೇವಾರಿ ಮಾಡಿತ್ತು.
ಕೆಲ ಸಮಾಜದ ಹಿತಶತ್ರುಗಳು ತಪ್ಪು ಮಾಹಿತಿಯನ್ನು ಹರಿಬಿಟ್ಟು ಸಮಾಜದಲ್ಲಿ ಸಂಘರ್ಷವನ್ನು ಸೃಷ್ಟಿ ಮಾಡುತ್ತಿದ್ದಾರೆ.ಇಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ರವಿ ಪೂಜಾರ, ದಾಸಪ್ಪ ಕರ್ಜಗಿ, ಅರ್ಜುನ ಹಂಚಿನಮನಿ, ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಮಳಗಾವಿ, ದ್ಯಾಮಣ್ಣ ಹರಸನಾಳ, ಹನುಮಂತಪ್ಪ ದೇವಗಿರಿ, ಜಗದೀಶ ಮಲಗೋಡ, ಜಗದೀಶ ಸವಣೂರ, ಹನುಮಂತಪ್ಪ ಬಂಡಿವಡ್ಡರ, ಕರಿಯಲ್ಲಪ್ಪ ಬಂಡಿವಡ್ಡರ ಇದ್ದರು.