ಹಾವೇರಿ: ತಾಲ್ಲೂಕಿನ ದೇವಿಹೊಸೂರಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ಶನಿವಾರ ಹೆಜ್ಜೇನು ದಾಳಿ ನಡೆದಿದೆ. ಅಸ್ವಸ್ಥಗೊಂಡ 12 ಮಕ್ಕಳು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಶಾಲೆಯ ಹಿಂಭಾಗ ಮರದಲ್ಲಿ ಇದ್ದ ಜೇನುಹುಳುಗಳು ಏಕಾಏಕಿ ಸಂಜೆ 4ರ ವೇಳೆಗೆ ಮಕ್ಕಳ ಮೇಲೆ ದಾಳಿ ನಡೆಸಿವೆ. ಸುಮಾರು 22 ಮಕ್ಕಳಿಗೆ ಹೆಜ್ಜೇನು ಕಚ್ಚಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು. ಮಕ್ಕಳ ತಲೆ, ಬೆನ್ನು, ಕೆನ್ನೆ, ತುಟಿ ಮುಂತಾದ ಭಾಗಗಳಿಗೆ ಕಚ್ಚಿದ ಪರಿಣಾಮ ಊತ ಕಾಣಿಸಿಕೊಂಡಿತು.
‘ವಿಷಯ ತಿಳಿದ ತಕ್ಷಣ ಸ್ಥಳೀಯ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಪಡೆದ ಸುಮಾರು 10 ಮಕ್ಕಳು ಸುರಕ್ಷಿತವಾಗಿ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡಿದ್ದ 12 ಮಕ್ಕಳನ್ನು ‘ನಗು–ಮಗು’ ವಾಹನದ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಲಾಗುತ್ತಿದೆ. ಎಲ್ಲ ಮಕ್ಕಳು ಸುರಕ್ಷಿತವಾಗಿದ್ದಾರೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ‘ಪ್ರಜಾವಾಣಿ’ಗೆ ತಿಳಿಸಿದರು.