ಹಾನಗಲ್: ತಾಲ್ಲೂಕಿನ ಬೀರಲಿಂಗೇಶ್ವರ ಜನಪದ ಕಲಿಕಾ ವಿದ್ಯಾ ಸಂಸ್ಥೆ ಅಡಿಯಲ್ಲಿ ವಿವಿಧ ಕಲಾ ಪ್ರಕಾರಗಳ ಕಲಾವಿದರು ವಿವಿಧ ಬೇಡಿಕೆ ಈಡೇರಿಸುವಂತೆ ಸೋಮವಾರ ಜಿಲ್ಲಾಧಿಕಾರಿ ರಘುನಂದನಮೂರ್ತಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಕಲಾವಿದರು ಮಾಶಾಸನ ಪಡೆಯಲು ಇರುವ 58 ವರ್ಷ ವಯೋಮಿತಿ ತೆಗೆದುಹಾಕಿ, ಈ ವಯೋಮಿತಿಯನ್ನು 50ಕ್ಕೆ ಇಳಿಸಬೇಕು. ಅಂಗವಿಕಲ ಕಲಾವಿದರು ಮಾಶಾಸನ ಪಡೆಯಲು ಅವರ ವಯೋಮಿತಿ 35ಕ್ಕೆ ನಿಗದಿ ಮಾಡಬೇಕು. ಈಗ ನೀಡುತ್ತಿರುವ ₹2 ಸಾವಿರ ಮಾಶಾಸನದ ಮಿತಿಯನ್ನು ಹೆಚ್ಚಿಸಿ ₹5 ಸಾವಿರ ಮಾಡಬೇಕು. ಬಡ ಕಲಾವಿದರು ಮನೆ ನಿರ್ಮಾಣಕ್ಕೆ ₹5 ಲಕ್ಷ ಸಹಾಯಧನ ನೀಡಬೇಕು. ತಾಲ್ಲೂಕಿಗೆ ಒಂದು ಕಲಾ ಭವನ ನಿರ್ಮಾಣ ಮಾಡಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.