ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿಜಾತ್ರೆಯ ತೇರಿಗೆ ಹಾವೇರಿಯಲ್ಲಿ ಇಂದು ಚಾಲನೆ

Last Updated 5 ಜನವರಿ 2023, 20:42 IST
ಅಕ್ಷರ ಗಾತ್ರ

ಹಾವೇರಿ: ‘ಕುಲದ ಮೂಲವೇನು ಬಲ್ಲಿರೇನಯ್ಯ?’ ಎಂದು ಕೇಳಿದ ಕನಕದಾಸರ ಜನ್ಮಭೂಮಿ, ಭಾವೈಕ್ಯದ ಗಾನ ಮೊಳಗಿಸಿದ ಶಿಶುನಾಳ ಶರೀಫಜ್ಜನ ಊರು ಹಾಗೂ ಜನಸಮುದಾಯದ ವಿವೇಕ ತಿದ್ದಿದ ಸರ್ವಜ್ಞನ ನಾಡಿನಲ್ಲಿ ಇದೇ 6,7 ಮತ್ತು 8ರಂದು 86ನೇ ‘ನುಡಿಜಾತ್ರೆ’ಯ ತೇರನ್ನು ಎಳೆಯಲು ಕನ್ನಡಿಗರು ಸಜ್ಜಾಗಿದ್ದಾರೆ.

‘ಸಂತ ಶರಣರ ನಾಡು– ಭಾವೈಕ್ಯದ ಬೀಡು’ ಎಂದೇ ಹೆಸರಾದ ಹಾವೇರಿಯು ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡ 25 ವರ್ಷಗಳ ನಂತರ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ವಹಿಸಿಕೊಂಡಿದೆ. ‘ಸಾಮರಸ್ಯದ ಭಾವ– ಕನ್ನಡದ ಜೀವ’ ಈ ಬಾರಿಯ ಘೋಷವಾಕ್ಯವಾಗಿದೆ.

ತಗ್ಗು– ಗುಂಡಿಬಿದ್ದ ರಸ್ತೆಗಳಿಗೆ ಡಾಂಬರು ಬಳಿದು, ಮಾಸಿ ಹೋದ ಗೋಡೆಗಳಿಗೆ ಸುಣ್ಣ– ಬಣ್ಣ ಹಚ್ಚಿ, ರಸ್ತೆ ಮತ್ತು ವೃತ್ತಗಳಿಗೆ ವಿದ್ಯುದ್ದೀಪಗಳನ್ನು ಸಿಂಗರಿಸಿ, ಗಿಡ– ಮರಗಳಿಗೆ ಕನ್ನಡ ಬಾವುಟವನ್ನು ಉಡಿಸಿ ಹಾವೇರಿ ನಗರವನ್ನು ಅಕ್ಷರ ಜಾತ್ರೆಗೆ ಮದುವಣ ಗಿತ್ತಿಯಂತೆ ಸಿಂಗರಿಸಲಾಗಿದೆ. ಏಲಕ್ಕಿ ನಾಡು ಕನ್ನಡದ ಕಂಪು ಬೀರಲು ಅಣಿ ಯಾಗಿದೆ.

ಕನ್ನಡ ರಥ ಸಂಚಾರ: ನುಡಿಜಾತ್ರೆಯ ಸಂದೇಶ ಸಾರುವ ‘ಕನ್ನಡ ರಥ’ವು ರಾಜ್ಯದ 31 ಜಿಲ್ಲೆಗಳಲ್ಲಿ ತಿಂಗಳ ಕಾಲ ಸಂಚರಿಸಿ ಹಾವೇರಿ ನಗರಕ್ಕೆ ಗುರುವಾರ (ಜ.5) ಮರಳಿ ಬಂದಿದ್ದು, ಸಿದ್ದಾಪುರ ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇಗುಲದಿಂದ ತೆಗೆದು
ಕೊಂಡ ದೀಪದಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟನೆ ಮಾಡಲಿ
ರುವುದು ಈ ಬಾರಿಯ ವಿಶೇಷ.

ಕೋಟೆ ಮಾದರಿ ಮುಖ್ಯದ್ವಾರ: ಹಾವೇರಿ ನಗರದ ಹೊರವಲಯದ ಅಜ್ಜಯ್ಯನ ದೇವಸ್ಥಾನದ ಎದುರು ಸುವಿಶಾಲವಾದ 128 ಎಕರೆಯಲ್ಲಿ ಜರ್ಮನ್‌ ತಂತ್ರಜ್ಞಾನ ಆಧಾರಿತ ಭವ್ಯ ವೇದಿಕೆ ನಿರ್ಮಿಸಲಾಗಿದೆ. ಪ್ರಧಾನ ವೇದಿಕೆ (ಕನಕ– ಶರೀಫ– ಸರ್ವಜ್ಞ) ಹಾಗೂ ಎರಡು ಸಮಾನಾಂತರ ವೇದಿಕೆಗಳಿಗೆ (ಪಾಪು– ಚಂಪಾ ವೇದಿಕೆ ಮತ್ತು ಹಾನಗಲ್‌ ಕುಮಾರ ಶಿವಯೋಗಿಗಳ ವೇದಿಕೆ) ಜನರು ಆಗಮಿಸಲು ಮತ್ತು ನಿರ್ಗಮಿಸಲು ಕೋಟೆ ಮಾದರಿಯ 3 ದ್ವಾರಬಾಗಿಲುಗಳನ್ನು ನಿರ್ಮಿಸಲಾಗಿದೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ರಥ

ಬೆಳಿಗ್ಗೆ 7.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾವೇರಿ ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಹೊರಟು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಿಗ್ಗೆ 10.30ಕ್ಕೆ ಸಮ್ಮೇಳನದ ವೇದಿಕೆ ತಲುಪಲಿದೆ. ಸಮ್ಮೇಳನಾಧ್ಯ ಕ್ಷರಿಗೆ ‘ಅರಮನೆ ದರ್ಬಾರ್‌’ ಮಾದರಿ ರಥ ಮತ್ತು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರುಗಳಿಗೆ 11 ಸಾರೋಟುಗಳನ್ನು ಸಿದ್ಧಪಡಿಸಿರುವುದು ಈ ಸಮ್ಮೇಳನದ ವಿಶೇಷವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಿಗ್ಗೆ 10.30ಕ್ಕೆ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಾ.ದೊಡ್ಡರಂಗೇಗೌಡ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಕಸಾಪ ಅಧ್ಯಕ್ಷ ಮಹೇಶ ಜೋಶಿ ಆಶಯ ನುಡಿಗಳನ್ನಾಡಲಿದ್ದಾರೆ. ಶಾಸಕ ಬಿ.ಎಸ್‌.ಯಡಿಯೂರಪ್ಪ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಭೂರಿ ಭೋಜನ: 35 ಎಕರೆಯಲ್ಲಿ ಅಡುಗೆ ಮನೆ ಮತ್ತು ಭೋಜನಾಲಯವನ್ನು ನಿರ್ಮಿಸಿದ್ದು, 200 ಕೌಂಟರ್‌ಗಳನ್ನು ತೆರೆಯಲಾಗಿದೆ. ಶೇಂಗಾ ಹೋಳಿಗೆ, ರವೆ ಉಂಡೆ, ಮೈಸೂರು ಪಾಕ್‌, ಮೋತಿಚೂರ್‌ ಲಡ್ಡು, ಕೇಸರಿಬಾತ್‌, ಶ್ಯಾವಿಗೆ ಕೀರು, ಗೋಧಿ ಹುಗ್ಗಿ ಸೇರಿದಂತೆ ಸಿಹಿ ಖಾದ್ಯಗಳನ್ನು ಒಳಗೊಂಡ ಭೂರಿ ಭೋಜನವನ್ನು ಸಿದ್ಧಪಡಿಸಲಾಗಿದೆ. ನಿತ್ಯ 1.5 ಲಕ್ಷ ಜನರಿಗೆ ಆಹಾರ ಬಡಿಸಲು 600 ಬಾಣಸಿಗರನ್ನು ಒಳಗೊಂಡ 1200 ಅಡುಗೆ ಸಿಬ್ಬಂದಿ ಸಜ್ಜಾಗಿದ್ದಾರೆ.

10 ಸಾವಿರ ಪ್ರತಿನಿಧಿಗಳು: 10 ಸಾವಿರ ಸಮ್ಮೇಳನದ ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದು, ಇವರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿದೆ. 31 ಜಿಲ್ಲೆಗಳಿಗೆ ಪ್ರತ್ಯೇಕ ಕೌಂಟರ್‌ ತೆರೆಯಲಾಗಿದ್ದು, ನೋಂದಣಿಗೆ ಹಾಗೂ ಓಓಡಿ ಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. 300 ಪುಸ್ತಕ ಮಳಿಗೆಗಳು ಮತ್ತು 200 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಉಚಿತ ಬಸ್‌ ಸೇವೆ: ಬೆಳಿಗ್ಗೆ 5.30ರಿಂದ ರಾತ್ರಿ 10.30ರವರೆಗೆ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಹಾಗೂ ಜಿಲ್ಲಾ ಕೇಂದ್ರದಿಂದ ವಿವಿಧ ತಾಲ್ಲೂಕು ಕೇಂದ್ರಗಳಿಗೆ ಬಸ್‌ಗಳು ಓಡಾಡಲಿವೆ. ಪ್ರತಿ 15 ನಿಮಿಷಕ್ಕೊಂದು ಬಸ್‌ ಸಂಚರಿಸಲಿದೆ. ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾರ್ವಜನಿಕರಿಗೆ ರೈಲ್ವೆ ಮತ್ತು ಬಸ್‌ ನಿಲ್ದಾಣದಿಂದ ಸಮ್ಮೇಳನದ ವೇದಿಕೆ ಸ್ಥಳಕ್ಕೆ ಸಂಚರಿಸಲು ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಕಲಾ ವೈಭವ: ಸಮ್ಮೇಳನದ ವಿವಿಧ ವೇದಿಕೆಗಳಲ್ಲಿ ಗಂಗಾವತಿ ಪ್ರಾಣೇಶ್‌ ತಂಡದಿಂದ ಹಾಸ್ಯ, ಆಳ್ವಾಸ್‌ ವಿದ್ಯಾರ್ಥಿ
ಗಳಿಂದ ಸಾಂಸ್ಕೃತಿಕ ವೈವಿಧ್ಯ, ‘ನಾವಾಡುವ ನುಡಿಯೇ ಕನ್ನಡ ನುಡಿ’ ಶೀರ್ಷಿಕೆಯಡಿ ಚಲನಚಿತ್ರ ಗೀತೆಗಳ ಗಾಯನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ರಂಜಿಸಲಿವೆ.

86ನೇ ನುಡಿಜಾತ್ರೆಯ ಅಂಗವಾಗಿ 86 ಸಾಧಕರಿಗೆ ಸನ್ಮಾನ ಮತ್ತು 86 ಕೃತಿಗಳ ಬಿಡುಗಡೆ ಮಾಡುತ್ತಿರುವುದು ಹಾವೇರಿ ಸಮ್ಮೇಳನದ ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT