ಹಾನಗಲ್: ‘ಸಾಂಕ್ರಾಮಿಕ ರೋಗ ಹತೋಟಿ ಸಮಯದಲ್ಲಿ ಸರ್ಕಾರಕ್ಕೆ ನೆರವು ನೀಡಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್, ತನ್ನ ಅನಗತ್ಯ ಹೇಳಿಕೆಗಳಿಂದ ಜನರಿಗೆ ಲಸಿಕೆ ಸಿಗುವುದು ವಿಳಂಬವಾಗಲು ಕಾರಣವಾಯಿತು’ ಎಂದು ಆರೋಗ್ಯ ಸಚಿವ ಡಾ.ಸುಧಾಕರ ಆಪಾದಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲಲ್ಲಿ ಮಾತನಾಡಿದ ಅವರು, ‘ಕೋವಿಡ್ ನಿರ್ವಹಣೆ ಬಗ್ಗೆ ಸದನದಲ್ಲಿ ಕಾಂಗ್ರೆಸ್ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ನೀಡಲು ಮುಂದಾದರೆ, ಕೇಳುವ ವ್ಯವಧಾನವೂ ಅವರಿಗೆ ಇರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಹಾನಗಲ್ ಪಟ್ಟಣದ ಚುನಾವಣಾ ಉಸ್ತುವಾರಿಯಾಗಿದ್ದೇನೆ. 10 ದಿನ ಇಲ್ಲಿಯೇ ಇರುತ್ತೇನೆ. ಹಾನಗಲ್ ಕ್ಷೇತ್ರದ ಜನರು 5 ವರ್ಷದ ಅವಧಿಗಾಗಿ ಬಿಜೆಪಿಗೆ ಮತ ನೀಡಿದ್ದರು. ನಮ್ಮ ಅವಧಿ ಇನ್ನೂ 18 ತಿಂಗಳು ಇದೆ. ಹೀಗಾಗಿ ಈ ಉಪ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಜನಾದೇಶ ಸಿಗಲಿದೆ’ ಎಂದರು.
‘ಹಿಂದುಳಿದ ವರ್ಗಗಳ ಬಗ್ಗೆ ಮಮತೆಯ ಮಾತುಗಳನ್ನಾಡುವ ಸಿದ್ದರಾಮಯ್ಯ, ತಮ್ಮ ಅಧಿಕಾರದ ಅವಧಿಯಲ್ಲಿ ಅಂದಿನ ಹಾನಗಲ್ ಶಾಸಕ ಮನೋಹರ ತಹಸೀಲ್ದಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಏಕಾಎಕಿ ಕೈಬಿಟ್ಟಿದ್ದೇಕೆ ಎಂಬ ಕಾರಣವನ್ನು ಈವರೆಗೂ ತಿಳಿಸಿಲ್ಲ. ಇದು ಹಿಂದುಳಿದ ಜನಾಂಗದ ಮೇಲಿನ ಸಿದ್ದರಾಮಯ್ಯ ಬದ್ಧತೆ’ ಎಂದು ಟೀಕಿಸಿದರು.